ಮಣಿಪಾಲ: ಎರಡು ಬಸ್ಗಳ ಸಿಬ್ಬಂದಿ ನಡುವೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ವಿಚಾರಕ್ಕೆ ಸಂಬಂಧಿಸಿ ಗಲಾಟೆ ನಡೆದಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ.
ಈ ವಿಚಾರವಾಗಿ ಖಾಸಗಿ ಬಸ್ವೊಂದರ ನಿರ್ವಾಹಕರಾಗಿರುವ ಮೊಹಮದ್ ಶಾಯಾನ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಸೋಮವಾರದಂದು ಮೊಹಮದ್ ಶಾಯಾನ್ ಮತ್ತು ಬಸ್ ಚಾಲಕ ಶೈಲೇಶ್ ರವರು ಮಂಗಳೂರು-ಮಣಿಪಾಲ ಟ್ರಿಪ್ ಮುಗಿಸಿ, ಮಣಿಪಾಲ ಬಸ್ ನಿಲ್ದಾಣದ ಬಳಿಯ ಗೂಡಂಗಡಿಯಲ್ಲಿ ಚಹಾ ಕುಡಿಯುತ್ತಿದ್ದಾಗ ಮತ್ತೊಂದು ಖಾಸಗಿ ಬಸ್ನ ಚಾಲಕ ಮುನಾಫ್ (ಮುನ್ನಾ) ಮತ್ತು ಬಸ್ನ ಮಾಲಕನ ಮಗ ಶರೀಕ್ ಎಂಬುವವರು ಬಂದು ಮೊಹಮದ್ ಶಾಯಾನ್ ಮತ್ತು ಶೈಲೇಶ್ ರವರ ಬಳಿ ನಮ್ಮ ಬಸ್ಸಿಗೆ ಬರುವ ಜನರನ್ನು ನೀನು ಯಾಕೆ ಪಿಕಪ್ ಮಾಡುತ್ತಿ ಎಂದು ಹೇಳಿ, ಅವ್ಯಾಚ್ಯ ಶಬ್ದದಿಂದ ಬೈದು ಕೈಯಿಂದ ಹೊಡೆದಿದ್ದಾರೆ ಎಂದು ಹೇಳಲಾಗಿದೆ.
ಈ ವೇಳೆ ಶೈಲೇಶ್, ನಾಸಿರುದ್ದೀನ್ ಹಾಗೂ ಸಾರ್ವಜನಿಕರು ಗಲಾಟೆ ಬಿಡಿಸಲು ಬಂದಾಗ ಆರೋಪಿಗಳು ಬಸ್ ಹತ್ತಿ ಅಲ್ಲಿಂದ ತೆರಳಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.