ಮಂಗಳೂರು: ಅನ್ಲೋಡ್ ಮಾಡುವ ವೇಳೆ ಪ್ಲಾಸ್ಟಿಕ್ ಮಣಿಗಳು ತುಂಬಿರುವ ಗೋಣಿಚೀಲಗಳು ಮೈಮೇಲೆ ಬಿದ್ದು ಲಾರಿ ಚಾಲಕ-ಮಾಲಕ ಮೃತಪಟ್ಟ ಘಟನೆ ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ನಿನ್ನೆ ನಡೆದಿದೆ.
ಮೃತಪಟ್ಟವರನ್ನು ಮುಹಮ್ಮದ್ ಮನ್ಸೂರ್ ಎಂದು ಗುರುತಿಸಲಾಗಿದೆ. ಲಾರಿ ಚಾಲಕ-ಮಾಲಕನಾಗಿದ್ದ ಮುಹಮ್ಮದ್ ಮನ್ಸೂರ್ ಮತ್ತು ಲಾರಿಯ ನಿರ್ವಾಹಕ ಸಿನಾನ್ ಅಫ್ರಿದ್ ಎಂಬವರು ಪ್ಲಾಸ್ಟಿಕ್ ಮಣಿಗಳ ಚೀಲಗಳನ್ನು ಎಂಆರ್ಪಿಎಲ್ನಿಂದ ಲೋಡ್ ಮಾಡಿಕೊಂಡು ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಬ್ರೈಟ್ ಪ್ಯಾಕೇಜಿಂಗ್ ಕಂಪನಿ ಯಾರ್ಡ್ಗೆ ತೆರಳಿದ್ದರು.
ರಾತ್ರಿ ಸುಮಾರು 7 ಗಂಟೆಗೆ ಲಾರಿ ನಿಲ್ಲಿಸಿ ಅನ್ಲೋಡ್ ಮಾಡುವ ಪ್ರಕ್ರಿಯೆ ಆರಂಭಿಸಿದ್ದರು. ಸಿನಾನ್ ಅಫ್ರಿದ್ ಲಾರಿಯ ಕ್ಯಾಬಿನ್ ಮೇಲೆ ಹತ್ತಿದ್ದರೆ ಮುಹಮ್ಮದ್ ಮನ್ಸೂರ್ ಕೆಳಗಿನಿಂದ ಹಗ್ಗ ಬಿಚ್ಚಿದ ವೇಳೆ ಆಕಸ್ಮಿಕವಾಗಿ ಲಾರಿಯ ಹಿಂಭಾಗದಲ್ಲಿದ್ದ ಪ್ಲಾಸ್ಟಿಕ್ ಮಣಿಗಳು ತುಂಬಿದ ಚೀಲಗಳು ಒಮ್ಮೆಲೆ ಜಾರಿ ಮುಹಮ್ಮದ್ ಮನ್ಸೂರ್ ಅವರ ಮೇಲೆ ಬಿದ್ದು ತೀವ್ರ ಅಸ್ವಸ್ಥಗೊಂಡಿದ್ದರು.
ತಕ್ಷಣ ಅವರನ್ನು ಕಂಪನಿಯ ಕಾರಿನಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಕೂಡ ಪ್ರಯೋಜನವಾಗಲಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.