ಕಾರ್ಕಳ: ತಾಲೂಕಿನ ಬಜಗೋಳಿ ಚೆಕ್ ಪೋಸ್ಟಿನಲ್ಲಿ ಸಿಬ್ಬಂದಿಗಳು ಮನುಷ್ಯತ್ವವೇ ಇಲ್ಲದೆ ರೀತಿ ವರ್ತಿಸಿದ ಕಾರಣ ಸೂಕ್ತ ಸಮಯಕ್ಕೆ ಮಹಿಳೆಯೋರ್ವಳು ಸಾವನ್ನಪ್ಪಿರುವ ಘಟನೆ ಕಾರ್ಕಳದ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ. ನಲ್ಲೂರು ನಿವಾಸಿ ಮಂಜುಳಾ (33) ಮೃತ ದುರ್ದೈವಿ.
ಏನಿದು ಘಟನೆ
ಮಂಜುಳಾ ಅವರಿಗೆ ಏಕಾಏಕಿ ತೀವ್ರವಾದ ಎದೆನೋವು ಕಾಣಿಸಿಕೊಂಡಿದ್ದರಿಂದ ಕಾರಿನಲ್ಲಿ ಆಸ್ಪತ್ರೆಗೆ ಕರೆತರಲಾಗುತ್ತಿತ್ತು. ಬಜಗೋಳಿ ಚೆಕ್ ಪೋಸ್ಟ್ ವಾಹನ ಅಡ್ಡಗಟ್ಟಿದ ಸಿಬ್ಬಂದಿ, ಖಾಸಗಿ ವಾಹನಕ್ಕೆ ಅನುಮತಿ ಇಲ್ಲ. ಆಯಂಬುಲೆನ್ಸ್ ಗೆ ಕರೆ ಮಾಡಿ, ಅದರಲ್ಲಿ ತೆಗೆದುಕೊಂಡು ಹೋಗಿ ಎಂದು ಸೂಚಿಸಿದ್ದಾರೆ. ಎಷ್ಟೇ ಮನವಿ ಮಾಡಿಕೊಂಡರು ಆಸ್ಪತ್ರೆಗೆ ತೆರಳಲು ಅವಕಾಶ ಮಾಡಿಕೊಟ್ಟಿಲ್ಲ. ಕೊನೆಗೆ ಅಲ್ಲಿಂದು ಹಿಂದುರಿಗಿ ಬಂದು, ಬೇರೆ ಮಾರ್ಗದ (ಅಡ್ಡ ರಸ್ತೆ) ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆಸ್ಪತ್ರೆಗೆ ತಲುಪುವಾಗ ವಿಳಂಬವಾಗಿದ್ದರಿಂದ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ್ದಾಳೆ ಎಂದು ಮೃತಳ ಸಂಬಂಧಿಕರು ಹೇಳಿದ್ದಾರೆ.
ಅಕ್ಕನನ್ನು ಕಳೆದುಕೊಂಡ ಸಹೋದರಿಯ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಮಂಜುಳಾ ಸಾವಿಗೆ ಚೆಕ್ ಪೋಸ್ಟಿನಲ್ಲಿ ವಿಳಂಬವಾಗಿರುವುದೇ ಕಾರಣ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.