ಬೆಂಗಳೂರು: ರಥ ಸಪ್ತಮಿ ಪ್ರಯುಕ್ತ (ಫೆ.19) ಅದ್ದೂರಿಯಾಗಿ ತೆರೆ ಕಂಡ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅಪಮಾನ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಆರೋಪಿಸಿದ್ದಾರೆ.
ಬ್ರಾಹ್ಮಣ ಸಮುದಾಯದ ಬಗ್ಗೆ ಪೊಗರು ಸಿನಿಮಾದಲ್ಲಿ ಅವಹೇಳನಕಾರಿಯಾದ ಹೇಳಿಕೆಗಳಿವೆ. ಇದರಿಂದ ಸಮುದಾಯದ ಜನರಿಗೆ ನೋವುಂಟಾಗಿದೆ. ಕೂಡಲೇ ಚಿತ್ರತಂಡ, ಪೊಗರು ಚಿತ್ರದ ನಿರ್ದೇಶಕ, ನಿರ್ಮಾಪಕರು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ವಾಣಿಜ್ಯ ಮಂಡಳಿಗೆ ದೂರು ನೀಡಲು ನಿರ್ಧರಿಸಲಾಗಿದೆ. ಜೊತೆಗೆ ಸಿನಿಮಾದಲ್ಲಿರುವ ದೃಶ್ಯವನ್ನು ತೆಗೆದುಹಾಕಬೇಕು. ಇಲ್ಲದಿದ್ದರೆ ಮುಂದೆ ಹೋರಾಟ ಮಾಡ್ತೀವಿ ಎಂದು ಸಚ್ಚಿದಾನಂದಮೂರ್ತಿ ಪೊಗರು ಸಿನಿಮಾ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಫೆ. 23ರಂದು ಚಲನಚಿತ್ರ ವಾಣಿಜ್ಯ ಮಂಡಳಿಗೆ ಈ ಬಗ್ಗೆ ಮನವಿ ಸಲ್ಲಿಸುತ್ತೇವೆ. ಫೆ.24ರ ಬುಧವಾರ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದು ಸಚ್ಚಿದಾನಂದಮೂರ್ತಿ ತಿಳಿಸಿದ್ದಾರೆ.
ಅಷ್ಟಕ್ಕು ಚಿತ್ರದಲ್ಲಿರುವುದೇನು?
ಸಿನೆಮಾದ ದೃಶ್ಯವೊಂದರಲ್ಲಿ ಅರ್ಚಕರು ಹೋಮ ಮಾಡ್ತಾ ಇರ್ತಾರೆ. ಅವಾಗ ವಿಲನ್ಗಳು ಎಂಟ್ರಿಯಾಗಿ ಹೋಮಕ್ಕೆ ತಡೆಯೊಡ್ಡುತ್ತಾರೆ. ಈ ಸಂದರ್ಭ ವಿಲನ್ ಒಬ್ಬ ಅರ್ಚಕನ ಹೆಗಲ ಮೇಲೆ ಕಾಲಿಟ್ಟು ಹೊಡೆಯುತ್ತಾನೆ. ಈ ದೃಶ್ಯದ ಬಗ್ಗೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.