ಮುಂಬೈ: ಮಹಾರಾಷ್ಟ್ರ ರಾಜ್ಯ ಸಾಮಾಜಿಕ ಮತ್ತು ನ್ಯಾಯ ಸಚಿವ ಧನಂಜಯ ಮುಂಡೆ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಗಾಯಕಿ ರೇಣು ಶರ್ಮಾ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಸ್ವತಃ ಗಾಯಕಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಪೊಲೀಸ್ ಆಯುಕ್ತ ಪರಂ ಭೀರ್ ಸಿಂಗ್ ಅವರಿಗೆ ಬರೆದಿರುವ ಪತ್ರದಲ್ಲಿ ಗಾಯಕಿ ರೇಣು ಶರ್ಮಾ ‘ಸಚಿವರು ತಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಧನಂಜಯ ಮುಂಡೆ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಆದರೆ, ಈ ಹಿಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗಾಯಕಿ ಆರೋಪಿಸಿದ್ದಾರೆ.

ಜನವರಿ 11ರಂದು ದೂರು ದಾಖಲಿಸಲು ಹೋಗಿದ್ದೆ. ಆದರೆ ಅಲ್ಲಿ ದೂರು ಸ್ವೀಕರಿಸಿಲ್ಲ. 1997ರಿಂದಲೂ ಧನಂಜಯ ಮುಂಡೆ ನನಗೆ ಪರಿಚಯ. ಆಗಿನಿಂದ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸುತ್ತಿದ್ದಾರೆ. ಬಾಲಿವುಡ್ ನಲ್ಲಿ ಗಾಯಕಿಯಾಗಲು ಅವಕಾಶ ಕೊಡಿಸುತ್ತೇನೆ ಎಂದು ಮೋಸ ಮಾಡಿದ್ದಾರೆ. ಈಗ ಮದುವೆಯಾಗುವುದಿಲ್ಲ ಎನ್ನುತ್ತಿದ್ದಾರೆ” ಎಂದು ದೂರಿದ್ದಾರೆ.

ಆದರೆ ಅತ್ಯಾಚಾರ ಆರೋಪವನ್ನು ತಳ್ಳಿಹಾಕಿರುವ ಸಚಿವ ಧನಂಜಯ್ ಮುಂಡೆ, ರೇಣು ಶರ್ಮಾರ ಸಹೋದರಿ ಜತೆ 2003ರಿಂದಲೂ ಸಂಬಂಧದಲ್ಲಿದ್ದು, ನಾವು ಇಬ್ಬರು ಮಕ್ಕಳನ್ನು ಹೊಂದಿದ್ದೇವೆ. ನಮ್ಮ ಸಂಬಂಧವನ್ನು ಅವರ ಕುಟುಂಬ ಸಹ ಒಪ್ಪಿಕೊಂಡಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ರೇಣು ಶರ್ಮಾ ಮತ್ತು ಆಕೆಯ ಸಹೋದರಿ ಬ್ಲ್ಯಾಕ್ಮೇಲ್ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಮತ್ತು ನನ್ನಿಂದ ಹಣವನ್ನು ಸುಲಿಗೆ ಮಾಡಿದ್ದಾರೆಂದು ಪ್ರತ್ಯಾರೋಪ ಮಾಡಿದ್ದಾರೆ. ತಾನು ಸಹ 2020ರ ನವೆಂಬರ್ನಲ್ಲಿ ಪೊಲೀಸ್ ದೂರು ದಾಖಲಿಸಿರುವುದಾಗಿ ಹೇಳಿದ್ದಾರೆ.