ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿನ ಸಮುದ್ರ ಮೀನುಗಳು ಕೇವಲ ಸ್ಥಳೀಯವಾಗಿ ಮಾರಾಟವಾಗುವುದಲ್ಲದೆ ಹಲವು ಇತರ ರಾಷ್ಟ್ರಕ್ಕೂ ರಫ್ತಾಗುತ್ತದೆ.ಇಲ್ಲಿನ ಮೀನಿಗೆ ಕೊಲ್ಲಿ ರಾಷ್ಟ್ರಗಳಲ್ಲಿ ಭಾರೀ ಬೇಡಿಕೆಯಿದೆ. ಮೀನುಗಳನ್ನು ಲಾಕ್ಡೌನ್ಗೂ ಮೊದಲು ಬೆಂಗಳೂರು, ಗೋವಾ ಅಥವಾ ಕೇರಳದ ಕೋಯಿ ಕ್ಕೋಡ್, ತಿರುವನಂತಪುರವರೆಗೆ ರಸ್ತೆ ಮಾರ್ಗವಾಗಿ ಸಾಗಿಸಿ ಅಲ್ಲಿಂದ ವಿಮಾನದಲ್ಲಿ ಕಳುಹಿಸಲಾಗುತ್ತಿತ್ತು. ಆದರೆ ಮಂಗಳೂರಿನ ವಿಮಾನಯಾನ ಸಂಸ್ಥೆಗಳ ನಿರಾಸಕ್ತಿ ಪರಿಣಾಮ ಮೀನಿನ ರಫ್ತು ಕಾರ್ಯ ಸಾಧ್ಯವಾಗುತ್ತಿಲ್ಲ.
ಇತರ ವಿಮಾನ ನಿಲ್ದಾಣಗಳ ಮೂಲಕ ರಫ್ತು ಮಾಡುವುದು ಹಣ ಮತ್ತು ಸಮಯ- ಎರಡೂ ದೃಷ್ಟಿಯಿಂದ ದುಬಾರಿ. ಹೀಗಾಗಿ ತಾಜಾ ಮೀನು ರಫ್ತು ಸಮಸ್ಯೆ ಆಗಿದೆ. ತಾಜಾ ಮೀನನ್ನು ಹಿಡಿದ ದಿನ ಅಥವಾ ಸಂಸ್ಕರಿಸಿ ಒಂದೆರಡು ದಿನಗಳೊಳಗೆ ವಿಮಾನದ ಮೂಲಕ ಗಲ್ಫ್ ರಾಷ್ಟ್ರಗಳಿಗೆ ಕಳುಹಿಸಬೇಕು ಆದರೆ ಮಂಗಳೂರು ವಿಮಾನ ನಿಲ್ದಾಣದಿಂದ ತಾಜಾ ಮೀನು ಸಾಗಾಟಕ್ಕೆ ಅವಕಾಶವಿಲ್ಲ. ಕರಾವಳಿ ಮೀನುಗಾರಿಕೆಯ ಈ ಸಮಸ್ಯೆಯ ಪರಿಹಾರಕ್ಕೆ ಸಂಬಂಧ ಪಟ್ಟವರು ಸಮರ್ಪಕ ನಿರ್ಧಾರ ಕೈಗೊಳ್ಳುವ ಅವಶ್ಯಕತೆ ಇದೆ.