ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧಿಸಿದಂತೆ ಈಗಾಗಲೇ ಅನೇಕ ನಟ ನಟಿಯರನ್ನು ಸಿಸಿಬಿ ವಿಚಾರಣೆ ನಡೆಸಿದೆ. ಮತ್ತೊಂದು ಕಡೆ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದು ಹೊಸ ಬಾಂಬ್ ಸಿಡಿಸುತ್ತಿದ್ದಾರೆ. ಇದೀಗ ಅವರು ಮಾಡಿರುವ ಟ್ವೀಟ್ ಒಂದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಈಗಾಗಲೇ ಡ್ರಗ್ಸ್ ಪ್ರಕರಣ ಸಂಬಂಧ ಜೈಲು ಸೇರಿದ ಮೇಲೆ ನಟಿಮಣಿಯರು ಒಂದಲ್ಲಾ ಒಂದು ತಕರಾರು ಮಾಡುತ್ತಲೇ ಬಂದಿದ್ದಾರೆ. ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಮಾಸ್ಟರ್ ಪ್ಲಾನ್ ಮಾಡ್ತಾನೆ ಇದ್ದಾರೆ. ಈ ಪ್ರಕರಣ ಸಂಬಂಧ ಈಗ ನಿರೂಪಕಿ ಅನುಶ್ರೀ ಕೂಡ ವಿಚಾರಣೆ ಎದುರಿಸಿದ್ದಾರೆ. ವಿಚಾರಣೆ ಎದುರಿಸಿದವರೆಲ್ಲಾ ಒಂದಲ್ಲಾ ಒಂದು ಡ್ರಾಮಾಗಳನ್ನು ಮಾಡುತ್ತಿದ್ದಾರೆ.
ಈ ಕುರಿತು ಪ್ರಶಾಂತ್ ಸಂಬರಗಿ ಟ್ವೀಟ್ ಮಾಡಿದ್ದಾರೆ. ಅವರು ಮಾಡಿದ ಟ್ವೀಟ್ ಹೀಗಿದೆ, ಕೊರೊನಾ ಇದೆ, ಹತ್ತಿರ ಬರಬೇಡಿ. ಇದು ಇವತ್ತು ಪ್ರದರ್ಶನವಾಗಲಿರುವ ಹೊಸ ಡ್ರಾಮಾ. ಪೊಲೀಸರು ಅರೆಸ್ಟ್ ಮಾಡುತ್ತಾರೆಂದು ಗೊತ್ತಾದ ತಕ್ಷಣ ನಾಟಕದ ರಾಣಿಯ ಹೊಸ ಅವತಾರ ಶುರುವಾಗುತ್ತದೆ ಎಂದು ನಟಿಯರ ಹೈಡ್ರಾಮಾದ ಬಗ್ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಆ ಟ್ವೀಟ್ ಹತ್ತಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.