ಬೆಂಗಳೂರು: ಇವತ್ತು ಗಣೇಶ ಚತುರ್ಥಿ. ಎಲ್ಲರೂ ಇಷ್ಟಪಡುವ ಹಬ್ಬಗಳಲ್ಲಿ ಒಂದು ಗಣೇಶನ ಹಬ್ಬ. ಬೇರೆ ಬೇರೆ ಹೆಸರುಗಳಿಂದ ಕರೆಸಿಕೊಳ್ಳುವ ಗಣಪ ಬೇರೆ ಬೇರೆ ರೂಪದಲ್ಲಿಯೂ ಪೂಜಿಸಲ್ಪಡುತ್ತಾನೆ. ಪ್ರತಿ ವರ್ಷ ಆ ವರ್ಷದ ವಿದ್ಯಾಮಾನಗಳಿಗೆ ತಕ್ಕಂತೆ ನಾವು ಬೇರೆ ಬೇರೆ ರೂಪದ ಗಣಪತಿಯ ಮೂರ್ತಿಗಳನ್ನು ನೋಡಿರುತ್ತೇವೆ. ಈ ವರ್ಷ ಕೊರೊನಾ ಅವತಾರದ ವಿಘ್ನನಿವಾರಕ ಸಾಕಷ್ಟು ಸದ್ದು ಮಾಡಿದ್ದ. ಅದರಲ್ಲೂ ಈ ಬಾರಿ ಕೊರೊನಾದಿಂದಾಗಿ ಅತ್ಯಂತ ಸರಳವಾಗಿ ಎಲ್ಲರೂ ಗಣೇಶೋತ್ಸವವನ್ನು ಆಚರಿಸುತ್ತಿದ್ದಾರೆ. ಹಾಗೇ ಹೆಚ್ಚಿನವರು ಗ್ರೀನ್ ವಿನಾಯಕನ ಮೊರೆ ಹೋಗಿದ್ದಾರೆ. ಪರಿಸರ ಸ್ನೇಹಿ ಗಣಪನನ್ನು ಆರಾಧಿಸುತ್ತಿದ್ದಾರೆ.
ಆದರೆ ಇದೆಲ್ಲದರ ನಡುವೆ ವಿಭಿನ್ನವಾದ ಗಣಪನೊಬ್ಬ ಗಮನ ಸೆಳೆಯುತ್ತಿದ್ದಾನೆ. ಅವನೇ ಬಿಸ್ಕತ್ತು ಗಣೇಶ. ಬೆಂಗಳೂರಿನ ಮೋನಿಕ ಅವರು ಬೇರೆ ಬೇರೆ ಬಿಸ್ಕತ್ತುಗಳನ್ನು ಉಪಯೋಗಿಸಿಕೊಂಡು ಅದರಲ್ಲೇ ಗಣಪನನ್ನು ತಯಾರಿಸಿದ್ದಾರೆ. ಮುದ್ದಾದ ಈ ಬಿಸ್ಕತ್ತು ಗಜಮುಖ ನೋಡುಗರನ್ನು ಥಟ್ ಅಂತಾ ಸೆಳೆಯುತ್ತಿದ್ದಾನೆ. ಮೂಷಿಕ ವಾಹನನಾದ ಈ ಗಣಪನನ್ನು ಸಂಪೂರ್ಣವಾಗಿ ಬಿಸ್ಕತ್ತಿನಲ್ಲೇ ತಯಾರಿಸಲಾಗಿದ್ದು, ಸರ್ವಂ ಬಿಸ್ಕತ್ತು ಮಯಂ ಅನ್ನೋ ಹಾಗಾಗಿದೆ. ಫೇಸ್ ಬುಕ್ ನಲ್ಲಿ ತಮ್ಮದೇ ಆದ ಬ್ಲಾಗ್ ಹೊಂದಿರುವ ಮೋನಿಕ ತಿನಿಸುಗಳನ್ನು ವಿವಿಧ ರೀತಿಯಲ್ಲಿ ವಿನ್ಯಾಸ ಮಾಡುದ್ರಲ್ಲಿ ಎಕ್ಸ್ಪರ್ಟ್ . ಸದಾ ಒಂದಿಲ್ಲೊಂದು ಇಂಟರೆಸ್ಟಿಂಗ್ ಪೋಸ್ಟ್ ಗಳನ್ನು ಮಾಡುತ್ತವೇ ಇರುತ್ತಾರೆ. ಇದೀಗ ಬಿಸ್ಕತ್ತಿನಲ್ಲಿ ಗಣೇಶನನ್ನು ತಯಾರಿಸಿದ್ದು ಸಖತ್ ಮುದ್ದಾಗಿದೆ. ಎಂತಹವರನ್ನೂ ಒಂದೇ ನೋಟದಲ್ಲಿ ಸೆಳೆಯುವಂತಿದೆ.