ಬೆಂಗಳೂರು: ಚಿರಂಜೀವಿ ಸರ್ಜಾ ನಿಧನರಾಗಿ ಎರಡು ತಿಂಗಳ ಮೇಲಾಯಿತು. ಅವರಿಲ್ಲ ಎಂಬ ನೋವು ಅಭಿಮಾನಿಗಳ ಮನದಿಂದ ಇನ್ನೂ ಹೋಗಿಲ್ಲ. ಹೀಗಿರುವಾಗಲೇ ಮಾವ ಅರ್ಜುನ್ ಸರ್ಜಾ ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಕೇಕ್ ಕಟ್ ಮಾಡದೆ, ಯಾರಿಂದಲೂ ಶುಭಾಶಯ ಸ್ವೀಕರಿಸದೆ, ಗಾಢವಾದ ನೋವಲ್ಲಿ ಅಗಲಿದ ಚಿರಂಜೀವಿಯನ್ನು ನೆನಪು ಮಾಡಿಕೊಂಡಿದ್ದಾರೆ.
ಈ ವರ್ಷ ನಿನ್ನ ಶುಭಾಶಯವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಮಗನೇ’ ಎಂದಿರುವ ಅರ್ಜುನ್ ಸರ್ಜಾ, ಚಿರು ಜತೆಗಿನ ಫೋಟೋ ಶೇರ್ ಮಾಡಿಕೊಂಡು ಭಾವುಕವಾಗಿ ಎರಡೇ ಸಾಲುಗಳನ್ನು ಬರೆದುಕೊಂಡಿದ್ದಾರೆ. ಅಂದಹಾಗೆ, ಆಗಸ್ಟ್ 15ಕ್ಕೆ ಅರ್ಜುನ್ ಸರ್ಜಾ ಜನ್ಮ ದಿನ. ಪ್ರತಿ ವರ್ಷ ಇಡೀ ಕುಟುಂಬದೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಅರ್ಜುನ್ ಸರ್ಜಾ, ಈ ವರ್ಷ ಚಿರು ನೋವಲ್ಲಿದ್ದಾರೆ.
ಚಿರಂಜೀವಿ ಜತೆಗಿರುವ ಮತ್ತು ಚಿರುಗೆ ಮೇಕಪ್ ಮಾಡುತ್ತಿರುವ ಎರಡು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಈ ಬಾರಿಯ ಜನ್ಮದಿನಕ್ಕೆ ನಿನ್ನನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ. ಅರ್ಜುನ್ ಹಂಚಿಕೊಂಡ ಫೋಟೋಕ್ಕೆ ಸಾವಿರಾರು ಮಂದಿ ಕಮೆಂಟ್ ಮೂಲಕ ಮಿಸ್ ಯೂ ಚಿರು ಎಂದಿದ್ದು, ಅರ್ಜುನ್ ಸರ್ಜಾ ಜನ್ಮದಿನಕ್ಕೂ ವಿಶ್ ಮಾಡಿದ್ದಾರೆ.
ಜೂನ್ 7ರಂದು ಹೃದಯ ಸ್ತಂಭನದಿಂದ ಚಿರಂಜೀವಿ ಬಾರದ ಲೋಕಕ್ಕೆ ಪ್ರಯಾಣಿಸಿದ್ದರು. ಇಡೀ ಕುಟುಂಬ ಸೇರಿ ಕರುನಾಡಿನ ಅಭಿಮಾನಿ ಬಳಗ ಶೋಕಸಾಗರದಲ್ಲಿ ಮುಳುಗಿತ್ತು.