ಎಂ.ಎಸ್. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸುತ್ತಿದ್ದಂತೆ ಇಡೀ ದೇಶ ಬಾರವಾದ ಮನಸ್ಸಿನಿಂದ ಅವರಿಗೆ ಮುಂದಿನ ಜೀವನ ಸುಖಕರವಾಗಿರಲಿ ಎಂದು ಆಶಿಸಿದೆ. ಕ್ರಿಕೆಟ್ ದಿಗ್ಗಜರಿಂದ ಹಿಡಿದು, ಸಿನಿಮಾದವರೂ ಈ ಹಿಟ್ ಮ್ಯಾನ್ಗೆ ಭಾವುಕ ವಿದಾಯ ಹೇಳಿದ್ದಾರೆ. ಇನ್ನೆಂದೂ ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಳ್ಳದ ಧೋನಿಯನ್ನು ಅಭಿಮಾನಿಗಳು ಶಾಶ್ವತವಾಗಿ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಸ್ಯಾಂಡಲ್ವುಡ್ ಸ್ಟಾರ್ ಕಿಚ್ಚ ಸುದೀಪ್ ಸಹ ಧೋನಿಯ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ.
ಅದ್ಬುತ ಕ್ರಿಕೆಟರ್ ಆಗಿ ಬಂದವರು, ಶ್ರೇಷ್ಠ ನಾಯಕನಾಗಿ ನಿವೃತ್ತಿಯಾಗಿದ್ದಾರೆ. ಸದ್ಯಕ್ಕಿದು ದಿಢೀರ್ ನಿರ್ಧಾರ. ಈಗಾಗಲೇ ನಾವು ನೀವೆಲ್ಲ ಧೋನಿ ಅವರ ಆಟವನ್ನು ನೋಡಿದ್ದೇವೆ. ಎಂಜಾಯ್ ಮಾಡಿದ್ದೇವೆ. ಆದರೆ, ಆ ಆಟವೇ ಕೊನೇ ಎಂದು ಯಾರಿಗೂ ಸುಳಿವು ಸಿಕ್ಕಿರಲಿಲ್ಲ. ಹಾಗಾಗಿ ಅವರ ಈ ನಿವೃತ್ತಿ ಸಲುವಾಗಿಯೇ ಒಂದು ಅದ್ದೂರಿ ಬೀಳ್ಕೊಡುಗೆ ಮಾಡಲೇಬೇಕು’ ಎಂದು ಸುದೀಪ್ ಬರೆದುಕೊಂಡಿದ್ದಾರೆ.
ನಟ ಕಿಚ್ಚ ಸುದೀಪ್ ಸಿನಿಮಾದಷ್ಟೇ ಇನ್ನೊಂದು ಕ್ಷೇತ್ರವನ್ನು ತುಂಬ ಇಷ್ಟಪಡುತ್ತಾರೆ ಅಂದು ಬೇರಾವುದು ಅಲ್ಲ ಕ್ರಿಕೆಟ್. ಬಿಡುವು ಸಿಕ್ಕಾಗಲೆಲ್ಲ ಕ್ರಿಕೆಟ್ ಆಡುತ್ತಾರೆ ಸುದೀಪ್. ಕನ್ನಡ ಚಲನಚಿತ್ರ ಕಪ್ ಆಯೋಜಿಸಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟಿಗರನ್ನೂ ಬೆಂಗಳೂರಿಗೆ ಕರೆಸಿದ್ದರು ಸುದೀಪ್. ಇದೀಗ ತನ್ನಿಷ್ಟದ ಆಟಗಾರನ ನಿವೃತ್ತಿ ಬಗ್ಗೆ ಕೊಂಚ ಬೇಸರದಲ್ಲಿಯೇ ಟ್ವಿಟ್ ಮಾಡಿದ್ದಾರೆ.