ಉಡುಪಿ: ಕಾಪು ತಾಲೂಕಿನ ಕಟಪಾಡಿ ಸಮೀಪದ ಸುಭಾಷ್ ನಗರದಲ್ಲಿರುವ ತೆಂಗಿನಕಾಯಿ ಸಂಸ್ಕರಣಾ ಹಾಗೂ ಸಂಗ್ರಹ ಘಟಕದಲ್ಲಿ ಶನಿವಾರ ಮುಂಜಾನೆ ಅಗ್ನಿ ಅವಘಡ ಸಂಭವಿಸಿದ್ದು, ಘಟಕದಲ್ಲಿ ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣದ ತೆಂಗಿನಕಾಯಿಗಳು ಬೆಂಕಿಗೆ ಆಹುತಿಯಾಗಿದ್ದು, ಸುಮಾರು ₹10ರಿಂದ ₹15 ಲಕ್ಷ ನಷ್ಟ ಸಂಭವಿಸಿರುವ ಪ್ರಾಥಮಿಕ ಅಂದಾಜು ಮಾಡಲಾಗಿದೆ.
ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮಾಹಿತಿ ದೊರೆತ ತಕ್ಷಣ ಉಡುಪಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಎರಡು ವಾಹನಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದವು. ಇದರಿಂದ ಬೆಂಕಿ ಸುತ್ತಮುತ್ತಲಿನ ಪ್ರದೇಶಗಳಿಗೆ ಹರಡುವುದನ್ನು ತಡೆಯಲಾಯಿತು.
ನಳಿನಿ ಪುಷ್ಪಲತಾ ಸಾಲಿಯಾನ್ ಅವರ ಮಾಲೀಕತ್ವದ ಘಟಕದಲ್ಲಿ ಹಲವು ವರ್ಷಗಳಿಂದ ಸಂಸ್ಕರಣೆ ಹಾಗೂ ಸಂಗ್ರಹ ಕಾರ್ಯ ನಡೆಯುತ್ತಿತ್ತು. ಅಗ್ನಿ ಅವಘಡಕ್ಕೆ ನಿಖರ ಕಾರಣ ಮತ್ತು ಒಟ್ಟು ನಷ್ಟದ ಪ್ರಮಾಣ ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.


