ಕಠ್ಮಂಡು:ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದ ದುರಂತದ ನಡುವೆಯೇ ಪವಾಡಸದೃಶ ಘಟನೆಯೊಂದು ನಡೆದಿದೆ. ಪ್ರವಾಹಕ್ಕೆ ಮನೆ ಕುಸಿದು ಬಿದ್ದು ೧೧ ದಿನಗಳು ಕಳೆದರೂ, ಅವಶೇಷಗಳ ಅಡಿಯಲ್ಲಿದ್ದ ೬೪ ವರ್ಷದ ವೃದ್ಧೆಯೊಬ್ಬರು ಜೀವಂತವಾಗಿ ರಕ್ಷಿಸಲ್ಪಟ್ಟಿದ್ದಾರೆ.
ಚಂದ್ರಿಕಾ ಶ್ರೇಷ್ಠ ಎಂಬ ವೃದ್ಧೆಯೇ ಈ ದೈವಿಕ ಪವಾಡದಿಂದ ಬದುಕಿ ಬಂದವರು. ಪ್ರವಾಹದ ಭೀಕರತೆಗೆ ಇಡೀ ಪ್ರದೇಶವೇ ಮಣ್ಣುಪಾಲಾಗಿದ್ದು, ಚಂದ್ರಿಕಾ ಅವರ ಮನೆಯೂ ಸಂಪೂರ್ಣವಾಗಿ ಹೂತುಹೋಗಿತ್ತು. ಆದರೆ ಅವಶೇಷಗಳ ಅಡಿಯಲ್ಲಿದ್ದ ಅವರ ಕ್ಷೀಣ ದ್ವನಿಯನ್ನು ಗ್ರಹಿಸಿದ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅವರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.
ಸುತ್ತಲೂ ಸಾವಿನ ತಾಂಡವವೇ ನಡೆದಿದ್ದರೂ ೧೧ ದಿನಗಳ ಕಾಲ ಆಹಾರ, ನೀರಿಲ್ಲದೆ ವೃದ್ಧೆ ಉಸಿರಾಡುತ್ತಿದ್ದುದ್ದು ಕಂಡು ರಕ್ಷಣಾ ಪಡೆಗಳೇ ಆಶ್ಚರ್ಯಚಕಿತಗೊಂಡಿವೆ. “ಆ ಮೇಲೊಬ್ಬ ಆಯುಷ್ಯ ಕೊಟ್ಟರೆ ಸಾವು ಕೂಡ ಹತ್ತಿರ ಸುಳಿಯುವುದಿಲ್ಲ” ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ಸ್ಥಳೀಯರು ಭಾವನಾತ್ಮಕವಾಗಿ ಕೊಂಡಾಡಿದ್ದಾರೆ.


