ಸುಳ್ಯ: ಕಳೆದ 2022 ರಲ್ಲಿ ಸುಳ್ಯದ ಬೀರಮಂಗಲದ ಬಾಡಿಗೆ ಮನೆಯಲ್ಲಿ ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಿ, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿಯನ್ನು ಸುಳ್ಯ ಪೊಲೀಸರು ಸುದೀರ್ಘ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಶ್ಚಿಮ ಬಂಗಾಳದ ಬಾಮನ್ ಪಕೂರ್ ನಿವಾಸಿ ಇಮ್ರಾನ್ ಶೇಖ್ ಬಂಧಿತ ಆರೋಪಿ. ಈತ ಸುಳ್ಯದ ಬಾರ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದು, ತನ್ನೊಂದಿಗಿದ್ದ ಅದೇ ಊರಿನ ಮಹಿಳೆಯೊಂದಿಗೆ ಬೀರಮಂಗಲದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಈ ವೇಳೆ ಮಹಿಳೆಯನ್ನು ಕೊಲೆ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದ.
ಕಳೆದ ೪ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗೆ ಸುಳ್ಯ ವೃತ್ತ ನಿರೀಕ್ಷಕರಾದ ತಿಮ್ಮಪ್ಪ ನಾಯಕ್ ಹಾಗೂ ಠಾಣಾ ಪಿಎಸ್ಐ ಉದಯ ರವಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಠಾಣಾ ಸಿಬ್ಬಂದಿಗಳಾದ ರಾಜು ನಾಯ್ಕ್, ಶ್ರೀಶೈಲ ಎಂ.ಕೆ. ಮತ್ತು ಸೋಮಯ್ಯ ಹಿರೇಮಠ ಅವರನ್ನೊಳಗೊಂಡ ಪೊಲೀಸ್ ತಂಡವು ಸೆಪ್ಟೆಂಬರ್ ೨ ರಂದು ಪಶ್ಚಿಮ ಬಂಗಾಳದ ಹಾದಿಪುರ್ ಗ್ರಾಮದಲ್ಲಿ ಆರೋಪಿಯನ್ನು ಬಂಧಿಸಿ ಸುಳ್ಯಕ್ಕೆ ಕರೆತಂದಿದೆ.
ಬಂಧಿತ ಆರೋಪಿಯನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.


