ಮೂಡುಬಿದಿರೆ: ಇಲ್ಲಿನ ಫೈನಾನ್ಸ್ ಸಂಸ್ಥೆಯೊಂದಕ್ಕೆ ಲಕ್ಷಾಂತರ ರೂಪಾಯಿ ವಂಚಿಸಿ, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉತ್ತರ ಉಪವಿಭಾಗದ ಅಪರಾಧ ಪತ್ತೆ ಪಡೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಬಂಧಿತ ಆರೋಪಿಯನ್ನು ಸುಳ್ಯ ತಾಲೂಕಿನ ಜಾಲ್ಲೂರು ಗ್ರಾಮದ ಬೈತಡ್ಕ ನಿವಾಸಿ ಶ್ರೀನಿವಾಸ ಬಿ.ಆರ್. (48) ಎಂದು ಗುರುತಿಸಲಾಗಿದೆ.
ಪ್ರಕರಣದ ಹಿನ್ನೆಲೆಯಂತೆ, ಆರೋಪಿ ಶ್ರೀನಿವಾಸ 2009ರಲ್ಲಿ ವಾಹನ ಖರೀದಿಸುವುದಕ್ಕಾಗಿ ಶ್ರೀರಾಮ್ ಫೈನಾನ್ಸ್ ಸಂಸ್ಥೆಯಿಂದ 10 ಲಕ್ಷ ರೂಪಾಯಿ ಸಾಲ ಪಡೆದು ‘ಟೆಲ್ಕಾನ್ ಇಎಕ್ಸ್ 70’ ವಾಹನವನ್ನು ಖರೀದಿಸಿದ್ದ. ಆದರೆ, ತದನಂತರ ಸಾಲದ ಕಂತುಗಳನ್ನು ಸರಿಯಾಗಿ ಪಾವತಿಸದೆ ಮತ್ತು ವಾಹನವನ್ನು ಪರಿಶೀಲನೆಗೆ ಹಾಜರುಪಡಿಸದೆ ಸಂಸ್ಥೆಗೆ ವಂಚಿಸಿದ್ದ. ಈ ಕುರಿತು 2012ರಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ (ಸಿಸಿ ನಂ.526/2025) ಸಂಬಂಧಿಸಿದಂತೆ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿದ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 2ರಂದು ಜಾಲ್ಲೂರು ಗ್ರಾಮದ ಬೈತಡ್ಕ ಜಂಕ್ಷನ್ನಲ್ಲಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಷ್ಟೇ ಅಲ್ಲದೆ, ಬಂಧಿತ ಆರೋಪಿಯ ವಿರುದ್ಧ ಮತ್ತೊಂದು ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದ ವಾರಂಟ್ ಕೂಡ ಬಾಕಿ ಉಳಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


