
ಸಂಪಾಜೆ: ಇಲ್ಲಿನ ಕಡೆಪಾಲ ಆಲಿಗುಡ್ಡೆಯ ನಿವಾಸಿ, ಇತ್ತೀಚೆಗೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ವಿವಾಹಿತ ಯುವತಿ ಫಾತಿಮತ್ ನಿಶಾನ ಕೊಲೆ ಪ್ರಕರಣದ ಆರೋಪಿ ಅಲವಿ ಎಂಬುವವರ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ವರದಿಯಾಗಿದೆ.
ಕಳೆದ ಜುಲೈ 18 ರಂದು ಕಡೆಪಾಲ ಆಲಿಗುಡ್ಡೆಯ ಫಾತಿಮತ್ ನಿಶಾನ ಎಂಬುವವರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾದ ಅಲವಿ ಎಂಬಾತನ ಮನೆ ಈಗ ಖಾಲಿಯಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು, ಮನೆಯ ಹಿಂಬದಿಯ ಕಿಟಕಿಯ ಗ್ರಿಲ್ ಮುರಿದು ಒಳನುಗ್ಗಿದ್ದಾರೆ.
ಮನೆಯಲ್ಲಿದ್ದ ಬಟ್ಟೆಬರೆ ಹಾಗೂ ವಸ್ತುಗಳನ್ನೆಲ್ಲ ಜಾಲಾಡಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಆದರೆ, ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಕುಟುಂಬಸ್ಥರು ಮೊದಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದರಿಂದ ಕಳ್ಳರಿಗೆ ಯಾವುದೇ ಆಭರಣ ಅಥವಾ ನಗದು ಸಿಕ್ಕಿಲ್ಲ. ಇದರಿಂದ ಕಳ್ಳರು ಬರಿಗೈಲಿ ವಾಪಸ್ ಆಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಅಬ್ದುಲ್ ರೆಹಮಾನ್ ಅವರ ಪುತ್ರ ಇಬ್ರಾಹಿಂ ನೀಡಿದ ದೂರಿನನ್ವಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.


