
ನೆಲ್ಯಾಡಿ: ಶ್ರೀ ರಾಮ ವಿದ್ಯಾಲಯ, ಸೂರ್ಯನಗರ, ನೆಲ್ಯಾಡಿಯಲ್ಲಿ ಬುಧವಾರ ಕ್ಷೇತ್ರ ಪಾಠ ಶಾಲಾ ಕಾರ್ಯಾಗಾರ ಹಾಗೂ ಭತ್ತ ಬೇಸಾಯ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಪುತ್ತೂರಿನ ಉಪ ಕೃಷಿ ನಿರ್ದೇಶಕರಾದ ಶ್ರೀ ಶಿವಶಂಕರ್ ದಾನೆಗೊಂಡರು ಅವರು ಭತ್ತದ ತೆನೆಯನ್ನು ಕಲಶಕ್ಕೆ ಅರ್ಪಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಅವರು ಭತ್ತದ ಕುರಿತು ಕವನ ವಾಚಿಸಿ, ಭತ್ತದ ಬೆಳೆಯ ಮಹತ್ವ ಹಾಗೂ ರೈತರ ಜೀವನದಲ್ಲಿ ಅದರ ಸ್ಥಾನವನ್ನು ವಿವರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರಿನ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಚೆಲುವರಂಗಪ್ಪ ಅವರು ಭತ್ತದ ಬೇಸಾಯದ ಆಧುನಿಕ ಹಾಗೂ ಪ್ರಾಯೋಗಿಕ ವಿಧಾನಗಳ ಕುರಿತು ರೈತರು, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಾಯಕ ಕಾರ್ಯನಿರ್ವಾಹಕರಾದ ಶ್ರೀ ವೆಂಕಟರಮಣ ಮಂಕುಡೆ ಅವರು ಕೃಷಿಯ ಮಹತ್ವ ಹಾಗೂ ವಿದ್ಯಾರ್ಥಿಗಳಲ್ಲಿ ಕೃಷಿ ಆಸಕ್ತಿ ಬೆಳೆಸುವ ಅಗತ್ಯವನ್ನು ಒತ್ತಿಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮೂಲಚಂದ್ರ ಕಾಂಚನ ವಹಿಸಿದ್ದರು. ವೇದಿಕೆಯಲ್ಲಿ ಶ್ರೀಮತಿ ಸ್ಮಿತಾ ಹಾಗೂ ಶ್ರೀ ವಿಖ್ಯಾತ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾಲೆಯ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಕೃಷಿ ವಿಷಯಕ್ಕೆ ಸಂಬಂಧಿಸಿದ ಸಂವಾದ ಕಾರ್ಯಕ್ರಮವೂ ನಡೆಯಿತು. ಶ್ರೀ ಗಣೇಶ್ ಅವರು ಸ್ವಾಗತಿಸಿದರು. ಶ್ರೀಮತಿ ಕಾವ್ಯ ಅವರು ವಂದಿಸಿದರು. ಶ್ರೀಮತಿ ಶುಭರಾಣಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.


