ಬಂಟ್ವಾಳದ ಬಿ.ಸಿ.ರೋಡ್ ಹೊಸ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ 5:45 ರ ಸುಮಾರಿಗೆ ಯುವತಿಯೊಬ್ಬಳನ್ನು ತಲವಾರಿನಿಂದ ಭೀಕರವಾಗಿ ಕೊಲೆ ಮಾಡಲಾದ ಆಘಾತಕಾರಿ ಘಟನೆ ನಡೆದಿದ್ದು, ಈ ಬಗ್ಗೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಮೃತ ಯುವತಿಯ ದೂರದ ಸಂಬಂಧಿ, ಬೆಳ್ತಂಗಡಿ ತಾಲೂಕಿನ ಒಡಿಲ್ನಾಳ ನಿವಾಸಿ ಚೇತನ್ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ.
ಇನ್ನು ಘಟನೆ ಸಂಬಂಧ ಲಾವಣ್ಯಾ ಅವರ ಭಾವ, ಮೃತ ಯುವತಿಯ ಸಹೋದರಿಯ ಪತಿ ಗೌತಮ್ ಎಂಬವರು ದೂರು ನೀಡಿದ್ದು, ಆ ದೂರಿನಲ್ಲಿರುವ ಅಂಶಗಳು ಇಲ್ಲಿವೆ.
ಕೇಳಿ ಗ್ರಾಮದ ಕಕ್ಯಪದವು ಸಮೀಪದ ಕೊಡಂಗೆ ನಿವಾಸಿ, ನರ್ಸಿಂಗ್ ಸಿಬ್ಬಂದಿ ಲಾವಣ್ಯ (22) ಆಕೆಯ ಅಕ್ಕ ಚೈತ್ರಾ ಕಲ್ಲಡ್ಕದ ನರ್ಸಿಂಗ್ ಹೋಮ್ನಲ್ಲಿ ಕೆಲಸ ಮಾಡುತ್ತಿದ್ದು, ಚೇತನ್ ಕಳೆದ ಕೆಲವು ಸಮಯದಿಂದ ಲಾವಣ್ಯಳನ್ನು ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದನು. ಆದರೆ ಲಾವಣ್ಯ ಆತನ ಪ್ರೀತಿಯನ್ನು ತಿರಸ್ಕರಿಸಿದ್ದರಿಂದ ಕೋಪಗೊಂಡ ಚೇತನ್ ಆಕೆಯನ್ನು ಕೊಲೆ ಮಾಡಲು ಹೊಂಚು ಹಾಕಿದ್ದನು.
ಗುರುವಾರ ಸಂಜೆ ಲಾವಣ್ಯ ಕೆಲಸ ಮುಗಿಸಿ ಮನೆಗೆ ಮರಳಲು ಬಸ್ ನಿಲ್ದಾಣಕ್ಕೆ ಬಂದಾಗ ಚೇತನ್ ಆಕೆಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಇದನ್ನು ಗಮನಿಸಿದ ಆಕೆಯ ಅಕ್ಕ ಚೈತ್ರಾ ತಕ್ಷಣ ತನ್ನ ಪತಿ ಗೌತಮ್ಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಗೌತಮ್ ಕೂಡಲೇ ಲಾವಣ್ಯಳಿಗೆ ಫೋನ್ ಮಾಡಿದ್ದಾರೆ. ಆಕೆ ಚೇತನ್ ಕಿರುಕುಳ ನೀಡುತ್ತಿರುವುದಾಗಿ ಹೇಳುವಷ್ಟರಲ್ಲೇ ಜೋರಾಗಿ ಕಿರುಚಾಟ ಕೇಳಿಬಂದು ಕರೆ ಕಟ್ ಆಗಿದೆ. ತಕ್ಷಣ ಗೌತಮ್ ಬಿ.ಸಿ.ರೋಡ್ನಲ್ಲಿದ್ದ ತನ್ನ ಸ್ನೇಹಿತ ಅಜಯ್ಗೆ ಸ್ಥಳಕ್ಕೆ ಹೋಗಲು ತಿಳಿಸಿದರಾದರೂ, ಅಜಯ್ ಅಲ್ಲಿಗೆ ತಲುಪುವಷ್ಟರಲ್ಲೇ ಘೋರ ದುರಂತ ನಡೆದುಹೋಗಿತ್ತು. ಚೇತನ್ ತಾನು ತಂದಿದ್ದ ತಲವಾರಿನಿಂದ ಲಾವಣ್ಯ ಅವರ ತಲೆಯ ಹಿಂಬದಿಗೆ ಭೀಕರವಾಗಿ ಕಡಿದು ಕೊಲೆ ಮಾಡಿ, ಆಯುಧವನ್ನು ಘಟನಾ ಸ್ಥಳದಲ್ಲೇ ಎಸೆದು ಪರಾರಿಯಾಗಿದ್ದಾನೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


