
ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಹಲವು ವರ್ಷಗಳಿಂದ ಉಂಟಾಗಿರುವ ಮನಸ್ತಾಪ ಹಾಗೂ ರಾಜತಾಂತ್ರಿಕ ಬಾಂಧವ್ಯವನ್ನು ಮರುಸ್ಥಾಪಿಸಿ, ಉಭಯ ದೇಶಗಳ ನಡುವೆ ಶಾಂತಿ ಮತ್ತು ಸೌಹಾರ್ದತೆಯನ್ನು ಮೂಡಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಎರಡೂ ದೇಶಗಳ ಒಟ್ಟು 117 ಪ್ರಮುಖ ಗಣ್ಯರು ಜಂಟಿ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.
‘ಆಪರೇಷನ್ ಸಿಂದೂರ್’ ನಡೆದು ಒಂದು ವರ್ಷ ಕಳೆದಿರುವ ಈ ಸಂದರ್ಭದಲ್ಲಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಈ ವಿಶೇಷ ಮನವಿ ಸಲ್ಲಿಸಲಾಗಿದೆ.
‘ಸೆಂಟರ್ ಫಾರ್ ಪೀಸ್ ಅಂಡ್ ಪ್ರೋಗ್ರೆಸ್’ (Centre for Peace and Progress) ಎಂಬ ಸಂಸ್ಥೆಯು ಈ ಜಂಟಿ ಅಭಿಯಾನವನ್ನು ಹಮ್ಮಿಕೊಂಡಿದ್ದು, ಈ ಪತ್ರಕ್ಕೆ ಭಾರತದ 61 ಹಾಗೂ ಪಾಕಿಸ್ತಾನದ 56 ರಾಜಕಾರಣಿಗಳು, ನಿವೃತ್ತ ರಾಜತಾಂತ್ರಿಕರು ಮತ್ತು ಚಿಂತಕರು ಸಹಿ ಹಾಕಿದ್ದಾರೆ.
ಭಾರತದ ಪರವಾಗಿ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ, ಪ್ರತ್ಯೇಕತಾವಾದಿ ನಾಯಕ ಮಿರ್ವೈಜ್ ಉಮರ್ ಫಾರೂಕ್, ಆರ್ಜೆಡಿ ಸಂಸದ ಮನೋಜ್ ಝಾ ಮತ್ತು ಟಿಎಂಸಿ ಮಾಜಿ ಸಚಿವ ಹುಮಾಯೂನ್ ಕಬೀರ್ ಅವರು ಸಹಿ ಮಾಡಿದ ಪ್ರಮುಖ ಗಣ್ಯರಾಗಿದ್ದಾರೆ.


