
ಉಡುಪಿ ಜಿಲ್ಲೆಯ ಕುರ್ಕಲ್ ಗ್ರಾಮದಲ್ಲಿರುವ ಇಂಡಿಯನ್ ಆಯಿಲ್ ಇಂಧನ ಕೇಂದ್ರದಲ್ಲಿ ಜೂನ್ 27 ರಂದು ರಾತ್ರಿ 9.20 ರ ಸುಮಾರಿಗೆ ಸಿನಿಮೀಯ ಮಾದರಿಯ ವಂಚನೆ ಘಟನೆ ನಡೆದಿದೆ.
ಬಿಳಿ ಬಣ್ಣದ ಫೋರ್ಡ್ ಇಕೋಸ್ಪೋರ್ಟ್ ಕಾರಿನಲ್ಲಿ ಬಂದ ಅಪರಿಚಿತ ಮೂವರು ಯುವಕರು, ಫುಲ್ ಟ್ಯಾಂಕ್ ಡೀಸೆಲ್ ಹಾಕುವಂತೆ ಕೇಳಿ ಬರೋಬ್ಬರಿ 4,711 ರೂಪಾಯಿ ಮೌಲ್ಯದ ಇಂಧನ ತುಂಬಿಸಿಕೊಂಡಿದ್ದಾರೆ. ಆ ಬಳಿಕ ಬಿಲ್ ನೀಡುವಂತೆ ಸಿಬ್ಬಂದಿಗೆ ಹೇಳಿ, ಅವರು ಬಿಲ್ ಸಿದ್ಧಪಡಿಸುವಷ್ಟರಲ್ಲಿ ಹಣ ಪಾವತಿಸದೆ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.
ಇನ್ನು ನಿರರ್ಗಳವಾಗಿ ತುಳು ಮಾತನಾಡುತ್ತಾ ತಾವು ಕುಮಟಾದವರೆಂದು ಹೇಳಿಕೊಂಡಿದ್ದ ಈ ಯುವಕರ ಕಾರಿನಲ್ಲಿ ಬಿಯರ್ ಬಾಟಲಿ ಹಾಗೂ ಚಿಪ್ಸ್ ಪ್ಯಾಕೆಟ್ಗಳು ಕಂಡುಬಂದಿದ್ದರಿಂದ ಅವರು ಮದ್ಯದ ಅಮಲಿನಲ್ಲಿದ್ದರು ಎಂದು ಸಿಬ್ಬಂದಿ ಶಂಕಿಸಿದ್ದು, ಕಾರಿನ ಕಿಟಕಿಗಳಿಗೂ ಕಪ್ಪು ಫಿಲ್ಮ್ ಅಳವಡಿಸಲಾಗಿತ್ತು. ಘಟನೆಯ ಸಿಸಿಟಿವಿ ದೃಶ್ಯಾವಳಿ ಲಭ್ಯವಿದ್ದರೂ ಕಾರಿನ ಪ್ರಖರವಾದ ಹೆಡ್ಲೈಟ್ ಬೆಳಕಿನಿಂದಾಗಿ ನೋಂದಣಿ ಸಂಖ್ಯೆಯನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗುತ್ತಿಲ್ಲ.
ಈ ಅಪರಾಧದಲ್ಲಿ ಬಂಕ್ ಸಿಬ್ಬಂದಿಯ ಯಾವುದೇ ಪಾತ್ರವಿಲ್ಲ ಎಂದು ವ್ಯವಸ್ಥಾಪಕ ಆಶಿಶ್ ಕರ್ಕಡ ಅವರು ನೀಡಿದ ದೂರಿನ ಮೇರೆಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ತನಿಖೆ ಮುಂದುವರಿದಿದೆ.


