ಭಾರತದ ಯುವ ಉದಯೋನ್ಮುಖ ಕ್ರಿಕೆಟರ್ ವೈಭವ್ ಸೂರ್ಯವಂಶಿಗೆ ಇದೀಗ ಬ್ಯಾನ್ ಭೀತಿ ಎದುರಾಗಿದೆ.
ಶ್ರೀಲಂಕಾ ‘ಎ’ ಮತ್ತು ಭಾರತ ‘ಎ’ ತಂಡಗಳ ನಡುವೆ ನಡೆದ ರೋಮಾಂಚಕ ಪಂದ್ಯವು ಸೂಪರ್ ಓವರ್ನಲ್ಲಿ ಭಾರತದ ಸೋಲಿನೊಂದಿಗೆ ಮುಕ್ತಾಯಗೊಂಡ ತಕ್ಷಣ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಶ್ರೀಲಂಕಾ ತಂಡದ ವಿಜಯೋತ್ಸವದ ವೇಳೆ ಎದುರಾಳಿ ವೇಗಿ ಕುಗಾಥಾಸ್ ಮಥುಲನ್ ಜೊತೆ ತೀವ್ರ ವಾಕ್ಸಮರಕ್ಕಿಳಿದ 15 ವರ್ಷದ ವೈಭವ್, ಸಿಟ್ಟಿನಲ್ಲಿ ಅವರನ್ನು ಕೈಯಿಂದ ತಳ್ಳಿದ್ದಾರೆ. ಸಹ ಆಟಗಾರರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರೂ, ಮೈದಾನದಲ್ಲಿ ದೈಹಿಕ ದೌರ್ಜನ್ಯ ನಡೆಸಿರುವುದು ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿರುವುದರಿಂದ ಪಂದ್ಯದ ರೆಫರಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನಲಾಗಿದೆ.
ಇನ್ನು ಇತ್ತೀಚೆಗಷ್ಟೇ ಐಪಿಎಲ್ 2026 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅತಿ ಹೆಚ್ಚು ರನ್ ಗಳಿಸಿ ‘ಆರೆಂಜ್ ಕ್ಯಾಪ್’ ಗೆದ್ದಿದ್ದ ಈ “ವಂಡರ್ ಕಿಡ್”, ಈ ಶಿಸ್ತು ಉಲ್ಲಂಘನೆಯಿಂದಾಗಿ ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದ ಸೀನಿಯರ್ ಟಿ20 ತಂಡದಿಂದ ಹೊರಬೀಳುವ ಅಥವಾ ನಿಷೇಧಕ್ಕೊಳಗಾಗುವ ಭೀತಿಯಲ್ಲಿದ್ದಾರೆ.


