ಸುಳ್ಯ: ವ್ಯಕ್ತಿಯೊಬ್ಬರು ಮನೆಯಂಗಳದಲ್ಲಿದ್ದಾಗ ತೆಂಗಿನಮರ ಮುರಿದು ಬಿದ್ದು ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ಸುಳ್ಯದ ಪೈಚಾರಿನಲ್ಲಿ ನಡೆದಿದೆ.
ಪೈಚಾರು ನಿವಾಸಿ ಶಾಫಿ ಪ್ರಗತಿ ಎಂಬವರ ಮನೆಯ ಮುಂಭಾಗದಲ್ಲಿ ಶಾಫಿ ಅವರ ಹಿರಿಯ ಸಹೋದರ ಹಸೈನಾರ್ ಅವರು ಟರೇಸ್ ನಿಂದ ಬೀಳುತ್ತಿದ್ದ ಮಳೆಯ ನೀರನ್ನು ಬಕೆಟ್ ಗೆ ತುಂಬುತ್ತಿದ್ದರು. ಅಷ್ಟರಲ್ಲಿ ಮನೆಯ ಮುಂಭಾಗದಲ್ಲಿದ್ದ ತೆಂಗಿನಮರ ಬುಡ ಸಮೇತ ಮುರಿದು ಬಿದ್ದಿದೆ.ಮರ ಬೀಳುತ್ತಿದ್ದನ್ನು ಗಮನಿಸಿದ ಹಸೈನಾರ್ ಅವರು ಕೂಡಲೇ ಹಿಂದಕ್ಕೆ ಸರಿದಿದ್ದಾರೆ. ಪರಿಣಾಮ ಮಹಾ ದುರಂತವೊಂದು ತಪ್ಪಿದೆ.
ಹಸೈನಾರ್ ಅವರು ಕೇವಲ ಒಂದು ಸೆಕೆಂಡ್ ತಡಮಾಡಿದ್ದರೂ ಭೀಕರ ದುರಂತವೊಂದು ಸಂಭವಿಸುತ್ತಿತ್ತು. ಇನ್ನು ಘಟನೆ ನಡೆಯುವ ಕೆಲಹೊತ್ತು ಅವರ ತಾಯಿ ಕೂಡ ಅಲ್ಲೇ ಇದ್ದರಂತೆ. ಅವರು ಮನೆಯ ಒಳಗೆ ಹೋದ ಕೂಡಲೇ ಘಟನೆ ನಡೆದಿದ್ದರಿಂದ ಅದೃಷ್ಟವಶಾತ್ ಪಾರಾಗಿದ್ದಾರೆ.ತೆಂಗಿನ ಮರವು ಅಂಗಳಕ್ಕೆ ಅಪ್ಪಳಿಸುವ ಮತ್ತು ಹಸೈನಾರ್ ಅವರು ಓಡಿ ಪ್ರಾಣ ಉಳಿಸಿಕೊಳ್ಳುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಬೆಚ್ಚಿ ಬೀಳಿಸುವಂತಿದೆ.


