ಬೆಂಗಳೂರು: ನಾಗರಭಾವಿಯ ಚಂದ್ರ ಲೇಔಟ್ ನಲ್ಲಿ ತಾಯಿ ಟೆರೆಸ್ ಮೇಲೆ ಒಣಗಿ ಹಾಕಿದ್ದ ಬಟ್ಟೆಗಳನ್ನು ತರಲು ಹೋದ ಸಂದರ್ಭ 11 ತಿಂಗಳ ಮಗು ಬಚ್ಚಲು ಮನೆಗೆ ಹೋಗಿ ಬಕೆಟ್ ತುಂಬಿದ ನೀರಿನಲ್ಲಿ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದ್ದು, ಈ ಘಟನೆಯಿಂದ ನೊಂದ ತಾಯಿಯೂ ನೇಣಿಗೆ ಶರಣಾಗಿದ್ದಾರೆ.
ಸಾಫ್ಟ್ ವೇರ್ ಉದ್ಯೋಗಿ ಪ್ರತಿಭಾ (29) ಹಾಗೂ 11 ತಿಂಗಳ ಮಗು ಅಗಸ್ತ್ಯ ಸಾವನ್ನಪ್ಪಿದ್ದಾರೆ.
ಘಟನೆಯ ವಿವರ: ನಾಗರಭಾವಿಯ ಚಂದ್ರ ಲೇಔಟ್ ನಲ್ಲಿ ಸಾಫ್ಟ್ ವೇರ್ ಉದ್ಯೋಗಿ ಪ್ರತಿಭಾ ಅವರು ತಮ್ಮ ಗಂಡ ಹಾಗೂ ಮಗುವಿನ ಜೊತೆ ವಾಸವಾಗಿದ್ದು, ವರ್ಕ್ ಫ್ರಮ್ ಹೋಂ ಕೆಲಸ ಮಾಡಿಕೊಂಡು ಮಗುವನ್ನು ನೋಡಿಕೊಂಡಿದ್ದರು. ನಿನ್ನೆ ಒಣಗಲು ಹಾಕಿರೋ ಬಟ್ಟೆ ತರಲು ಟೆರೆಸ್ ಮೇಲೆ ಹೋಗಿದ್ದು, ಆ ಸಮಯದಲ್ಲಿ 11 ತಿಂಗಳ ಮಗು ಅಗಸ್ತ್ಯ ಬಚ್ಚಲು ಮನೆಗೆ ಹೋಗಿ ನೀರು ತುಂಬಿದ ಬಕೆಟ್ ಒಳಗೆ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.
ಈ ಘಟನೆಯಿಂದ ನೊಂದ ತಾಯಿ ಡೆತ್ ನೋಟ್ ಬರೆದಿಟ್ಟು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ..
ನನ್ನ ಮಗನ ಸಾವಿಗೆ ನಾನೆ ಕಾರಣಳಾಗಿದ್ದು, ಅವನನ್ನು ಉಳಿಸಿಕೊಳ್ಳಲು ಆಗಲಿಲ್ಲ. ಅದಕ್ಕಾಗಿ ನಾನೇ ಆತ್ಮಹತ್ಯೆ ಮಾಡ್ಕೋತಿದೀನಿ ಎಂದು ಬರೆದಿಟ್ಟು ತಾಯಿ ಪ್ರತಿಭಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿಭಾ ಮೊದಲು ಸಾಯಲು ಮಾತ್ರೆ ನುಂಗಿದ್ದು, ಏನು ಆಗದೇ ಇರುವ ಕಾರಣದಿಂದ ಕೈ ಕುಯ್ಕೊಂಡಿದ್ದಾರೆ ಅದು ಆಗಿಲ್ಲವೆಂದು ನೇಣು ಹಾಕಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರತಿಭಾ ಗಂಡ ಕೆಲಸ ಮುಗಿಸಿ ಮನೆಗೆ ಬಂದಾಗ ಬಾಗಿಲು ಒಳಗಿನಿಂದ ಲಾಕ್ ಆಗಿದ್ದು, ಬಾಗಿಲನ್ನು ಇನ್ನೊಂದು ಕೀಲಿಯಿಂದ ತೆರೆದಾಗ ಬೆಳಕಿಗೆ ಬಂದಿದೆ.


