ರಾಯಚೂರಿನ ಖಾಸಗಿ ಆಸ್ಪತ್ರೆಯ ಮೇಲಿಂದ ಬಿದ್ದು ಬಾಣಂತಿ ಸಾವನ್ನಪ್ಪಿದ ಆಘಾತಕಾರಿ ಘಟನೆ ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದಲ್ಲಿ ನಡೆದಿದೆ.
ಮಾನ್ವಿ ಪಟ್ಟಣದ ಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈ ಅವಘಡ ಸಂಭವಿಸಿದ್ದು, 3ನೇ ಮಹಡಿಯಿಂದ ಬಿದ್ದು ಬಾಣಂತಿ 22 ವರ್ಷದ ವಾಸವಿ ಸಾವನ್ನಪ್ಪಿದ್ದಾರೆ.
ಮಹಿಳೆಯು ಐದು ದಿನಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದರು. ಆದರೆ ನವಜಾತ ಶಿಶು ಅನಾರೋಗ್ಯಕ್ಕೀಡಾಗಿದ್ದರಿಂದ ಮಗುವಿಗೆ ಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೀಗಾಗಿ ಮಗುವಿಗೆ ಎದೆ ಹಾಲು ಕುಡಿಸಲು ಆಸ್ಪತ್ರೆಗೆ ವಾಸವಿ ಬಂದಿದ್ದರು. ಆದರೆ ಮಗುವಿಗೆ ಹಾಲು ಕುಡಿಸುವುದು ಬಿಟ್ಟು ಬಾಣಂತಿ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದು, ಅವರ ಸಾವು ಈಗ ಭಾರಿ ಅನುಮಾನ ಮೂಡಿಸಿದೆ.
ಬಹುಶಃ ಅವರೇ ಕಟ್ಟಡದಿಂದ ಕೆಳಗೆ ಹಾರಿ ಸಾವಿಗೆ ಯತ್ನಿಸಿದರ ಎಂಬ ಅನುಮಾನ ಮೂಡಿದೆ. ಇತ್ತ ಬಾಣಂತಿ ಬಿದ್ದು ಮೃತಪಟ್ಟ ದೃಶ್ಯ ಆಸ್ಪತ್ರೆ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂಬ ಮಾಹಿತಿ ಇದ್ದು, ಘಟನೆಗೆ ಸಂಬಂಧಿಸಿದ ಸಿಸಿಟಿವಿ ವಿಡಿಯೋ ಇದ್ದರೂ ದೂರು ನೀಡಲು ಆಸ್ಪತ್ರೆ ಸಿಬ್ಬಂದಿ ಹಿಂದೇಟು ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬಾಣಂತಿ ಸಾವನ್ನಪ್ಪಿದರೂ ಆಸ್ಪತ್ರೆಯಿಂದ ಎಂಎಲ್ ಸಿ ಸಹ ದಾಖಲು ಮಾಡಿಲ್ಲ, ಹೀಗಾಗಿ ಆಸ್ಪತ್ರೆ ನಡೆ ಬಗ್ಗೆ ಬಾಣಂತಿ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


