ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿಕರಿಗೆ ಕೋವಿ ಪರವಾನಗಿ ನವೀಕರಣಕ್ಕೆ ಅನುಮತಿ ಸಿಗದ ವಿಚಾರ ವಿಧಾನಸಭೆಯಲ್ಲಿ ಪ್ರಸ್ತಾಪವಾಗಿದೆ.
ಪ್ರಶ್ನೋತ್ತರ ಕಲಾಪದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಕೇಳಿದ್ದು, ಗೃಹ ಸಚಿವರ ಉತ್ತರಕ್ಕೆ ಸದನದಲ್ಲಿ ಗರಂ ಆಗಿದ್ದಾರೆ.
ಕೃಷಿಕರು ನಕಲಿ ಗನ್ ಬಳಕೆ ಮಾಡಿದರೆ ಮಂಗಗಳು ಹೆದರಲ್ಲ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಡು ಹಂದಿಗಳ ಕಾಟ ಜೋರಾಗಿದ್ದು, ಕಾಡಾನೆ ದಾಳಿಯಿಂದ ಮೂರು ಜನ ಮೃತಪಟ್ಟಿದ್ದಾರೆ, ಅದರೆ ಪೊಲೀಸರು ಕೋವಿ ಪರವಾನಗಿ ನವೀಕರಣ ಮಾಡುತ್ತಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಸದನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಾಣಿಗಳು ಹಾನಿ ಮಾಡಿ ಬಳಿಕ ಪರಿಹಾರ ಸಿಕ್ಕಿದರೆ ಕೋವಿ ಪರವಾನಗಿ ಕೊಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.ಹಾಗಾದರೆ ನಮ್ಮ ಜಮೀನಿಗೆ ನಾವೇ ಪ್ರಾಣಿ ತಂದು ಬಿಡಬೇಕಾ ಎಂದು ಪ್ರಶ್ನಿಸಿರುವ ಅಶೋಕ್ ಕುಮಾರ್ ರೈ, ಕ್ರಿಮಿನಲ್ ಕೇಸ್ ಇದ್ದರೆ ಅವರಿಗೆ ಕೋವಿ ಪರವಾನಗಿ ಬೇಡ, ಆದರೆ ಅಗತ್ಯ ಇದ್ದವರೆಗೆ ಕೊಡಿ ಎಂದು ಮನವಿ ಮಾಡಿದ್ದಾರೆ.
ನಿಮಯ ಪಾಲನೆ ಮಾಡಿ ಪೆಂಡಿಂಗ್ ಇರುವ ಅರ್ಜಿಗಳನ್ನು ಕ್ಲಿಯರ್ ಮಾಡುತ್ತೇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಉತ್ತರಕ್ಕೆ, ನಿಯಮ ಸರಿ ಇರುವುದಕ್ಕೇ ಕೇಳುತ್ತಿರುವುದು ಎಂದು ಶಾಸಕ ಅಶೋಕ್ ರೈ ಗರಂ ಆಗಿಯೇ ಪ್ರತಿಕ್ರಿಯಿಸಿದರು.


