ಮಂಗಳೂರು: ದೇರಳಕಟ್ಟೆ ಖಾಸಗಿ ಆಸ್ಪತ್ರೆ ಬಳಿ ನಿಂತಿರುವ ಕೊಳಚೆ ನೀರಿನಿಂದ ಸಾರ್ವಜನಿಕರಿಗೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿ ತುಳು ನಾಡ ರಕ್ಷಣಾ ವೇದಿಕೆ ಹಾಗೂ ಆಟೋರಿಕ್ಷಾ ಚಾಲಕರ ಘಟಕದ ಆಶ್ರಯದಲ್ಲಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಯ ಬಳಿ ಇರುವ ರಿಕ್ಷಾ ಪಾರ್ಕ್ನಲ್ಲಿ ಪ್ರತಿಭಟನೆ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತುಳು ನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಕೊಳಚೆ ನೀರು ಆಸ್ಪತ್ರೆ ಸಮೀಪದ ರಿಕ್ಷಾ ಪಾರ್ಕ್ ಬಳಿ ಶೇಖರಗೊಂಡಿದೆ.
ದೇರಳಕಟ್ಟೆ ಪರಿಸರದಲ್ಲಿ ನಿರ್ಮಾಣವಾಗಿರುವ ಬಹುಮಹಡಿ ಕಟ್ಟಡಗಳ ಕೊಳಚೆ ನೀರು ಸರಬರಾಜಿಗೆ ಸುಸಜ್ಜಿತ ವ್ಯವಸ್ಥೆ ಮಾಡಿಲ್ಲ. ಇದರ ದುರ್ವಾಸನೆಯಿಂದ ಸಾಂಕ್ರಾಮಿಕ ರೋಗಗಳು ಕೂಡ ಹರಡುತ್ತಿವೆ. ಆದರೂ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳದೆ ನಿದ್ದೆಗೆ ಜಾರಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ತುಳು ನಾಡ ರಕ್ಷಣಾ ವೇದಿಕೆ ಮುಖಂಡ ಕ್ಲೀಟಸ್ ಲೋಬೊ ಅಳಕೆ, ರಕ್ಷಿತ್ ಕುಡುಪು, ಪ್ರಶಾಂತ್ ಭಟ್ ಕಡಬ ಹಾಗೂ ರಿಕ್ಷಾ ಚಾಲಕರು ಮತ್ತು ಮಾಲಕರು ಉಪಸ್ಥಿತರಿದ್ದರು.


