ಚಿಕ್ಕಮಗಳೂರು: ಟಿವಿ ನೋಡುತ್ತಾ ಊಟ ಮಾಡುವಾಗ ತಟ್ಟೆ ಬೀಳಿಸಿದ್ದಕ್ಕೆ ತಾಯಿ ಬೈದರು ಎಂದು ಮನನೊಂದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆದಿದೆ. ಏಳನೇ ತರಗತಿ ವಿದ್ಯಾರ್ಥಿನಿ ಸುಪ್ರಿತಾ ಮೃತ ದುರ್ದೈವಿ.
ಕೆಲಸಕ್ಕೆ ಹೋಗಿದ್ದ ತಾಯಿ ಮಧ್ಯಾಹ್ನ ಊಟಕ್ಕೆ ಮನೆಗೆ ಬಂದಿದ್ದರು. ಈ ವೇಳೆ ಊಟ ಮಾಡುತ್ತಿದ್ದ ಸುಪ್ರಿತಾ, ಟಿವಿ ನೋಡುತ್ತಾ ತಟ್ಟೆ ಬೀಳಿಸಿ ಅನ್ನವನ್ನು ಚೆಲ್ಲಿದ್ದಾಳೆ. ಅದಕ್ಕೆ ತಾಯಿ ಟಿವಿ ನೋಡುವುದು ಕಡಿಮೆ ಮಾಡು, ಚೆಲ್ಲಿರುವ ಅನ್ನವನ್ನು ಕ್ಲೀನ್ ಮಾಡು ಎಂದು ಹೇಳಿ ಮತ್ತೆ ಕೆಲಸಕ್ಕೆ ಹೋಗಿದ್ದರು. ತಾಯಿ ಕೆಲಸಕ್ಕೆ ಹೋದ ಬೆನ್ನಲ್ಲೇ ಬಾಲಕಿ ಸುಪ್ರಿತಾ ತನ್ನದೇ ವೇಲ್ ನಿಂದ ಮನೆಯ ಮೇಲ್ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ವಿಷಯ ತಿಳಿದು ಮನೆಗೆ ಬಂದ ತಾಯಿ ಕೂಡಲೇ ಆಕೆಯನ್ನ ಆಸ್ಪತ್ರೆಗೆ ಕರೆದೊಯ್ದರು ಬಾಲಕಿ ಸಾವನ್ನಪ್ಪಿದ್ದಾಳೆ. ಮೃತ ಬಾಲಕಿ ತಾಯಿ ಸರೋಜ ಗಂಡನಿಂದ ಬೇರೆಯಾಗಿ ಬೇರೆ ವಾಸವಿದ್ದಳು. ಹಿರಿಯ ಮಗಳು ತಾಯಿ ಜೊತೆ ಇದ್ದರೆ, ಕಿರಿಯ ಮಗಳು ತಂದೆ ಜೊತೆ ಇದ್ದಳು. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


