ಬೆಳ್ತಂಗಡಿ : ಕುಡಿದ ಮತ್ತಿನಲ್ಲಿ ಇಬ್ಬರು ಸ್ನೇಹಿತರು ಬಾವನ ಮನೆಗೆ ಹೋಗುವಾಗ ದಾರಿತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ ಚಲಾಯಿಸಿಕೊಂಡು ಹೋಗುವಾಗ 25 ರಿಂದ 30 ಜನರ ಗುಂಪು ಸೇರಿ ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ ಘಟನೆ ನಡೆದಿದೆ. ಈ ಸಂಬಂಧ 8 ಮಂದಿ ವಿರುದ್ಧ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

ಘಟನೆ ವಿವರ: ಅಬ್ದುಲ್ ಸಮದ್ ಮತ್ತು ಸ್ನೇಹಿತ ಮೊಯಿದ್ದೀನ್ ನಾಸಿರ್ ಇಬ್ಬರು ಮರೋಡಿಯಲ್ಲಿರುವ ತನ್ನ ಬಾವನ ಮನೆಗೆ ಜ.20 ರಂದು ಜಾವ 2:15 ಗಂಟೆಯಿಂದ 2:30 ಗಂಟೆಯ ಮಧ್ಯದ ಅವಧಿಯಲ್ಲಿ ಬರುವಾಗ ಅಬ್ದುಲ್ ಸಮದ್ ಮತ್ತು ಸ್ನೇಹಿತನಿಗೆ ಕುಡಿದ ಮತ್ತಿನಲ್ಲಿ ಬಾವನ ಮನೆ ತಿಳಿಯದೇ ಇದ್ದು, ಬಳಿಕ ಹುಡುಕಾಡಿ ನಡೆದುಕೊಂಡು ಹೋಗುವ ಸಮಯ ಪಳಾರಗೋಳಿ ಎಂಬಲ್ಲಿ ಮನೆಯ ಬಳಿ ರಸ್ತೆ ಬದಿ ನಿಲ್ಲಿಸಿದ್ದ ಬೈಕನ್ನು ತೆಗೆದುಕೊಂಡು ಹೋಗುವಾಗ ಎರಡು ಬೈಕ್ ನಲ್ಲಿ ಬಂದ 4-5 ಜನರು ಅಡ್ಡ ಹಾಕಿದಾಗ ಅವರಿಂದ ತಪ್ಪಿಸಿಕೊಂಡು ಬೆಳ್ತಂಗಡಿ ತಾಲೂಕು ಮರೋಡಿ ಗ್ರಾಮದ ಪಳಾರಗೋಳಿ ಎಂಬಲ್ಲಿ ಸುಮಾರು 25 ರಿಂದ 30 ಜನರ ಗುಂಪು ಅಬ್ದುಲ್ ಸಮದ್ ನನ್ನು ಸುತ್ತುವರಿದು ಮರಕ್ಕೆ ಕಟ್ಟಿ ಹಾಕಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ ಕಳುಹಿಸಿದ್ದು, ಆರೋಪಿತರ ಹಲ್ಲೆಯಿಂದ ಅಬ್ದುಲ್ ಸಮದ್ ಹಾಗು ಮೊಯಿದ್ದಿನ್ ನಾಸಿರ್ ರವರಿಗೆ ಮೈಕೈಗೆ, ಬೆನ್ನಿಗೆ ಗಾಯಗಳಾಗಿದೆ.
ಈ ಬಗ್ಗೆ ಹಲ್ಲೆಯಿಂದ ಗಾಯಗೊಂಡ ಅಬ್ದುಲ್ ಸಮದ್ ವೇಣೂರು ಪೊಲೀಸ್ ಠಾಣೆಯಲ್ಲಿ ಜ.20 ರಂದು ಆರೋಪಿಗಳಾದ ಬಾಚು,ನಿಶೀತ್,ನರೇಶ್ ಅಂಚನ್, ಮರೋಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತ್ನಾಕರ ಬುಣ್ಣನ್,ಸಸ್ತಿಕ್,ದೇವಿಪ್ರಸಾದ್,ಸುಧೀರ್,ಚಂದಪ್ಪ ವಿರುದ್ಧ ಕಲಂ 189(2), 191(2), 191(3), 352, 115(2), 118(1), 351(2) ಜೊತೆಗೆ 190 ಬಿ.ಎನ್.ಎಸ್-2023ಯಂತೆ ಪ್ರಕರಣ ದಾಖಲಾಗಿದೆ.


