ಬೆಳ್ತಂಗಡಿ: ಕಾನೂನಿನ ನಿಯಮ ಬಾಹಿರ ಮಾಡಿದ್ದಕ್ಕಾಗಿ ಬೆಳ್ತಂಗಡಿ ತಾಲೂಕಿನ ಅಂಡಿಂಜೆ ಗ್ರಾಮ ಪಂಚಾಯತ್ ಸದಸ್ಯ ಜಗದೀಶ ಹೆಗ್ಡೆಯವರ ಸದಸ್ಯತ್ವ ಅನೂರ್ಜಿತಗೊಳಿಸಿ ಮುಂದಿನ 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪೀಠಾಧಿಕಾರಿಗಳು ಆದೇಶ ನೀಡಿದ್ದಾರೆ.
ಜಗದೀಶ ಹೆಗ್ಡೆ ಅವರು ತಮ್ಮ ಸಹೋದರನಿಗೆ ಗ್ರಾಮ ಪಂಚಾಯತ್ ನ ಕಾಮಗಾರಿ ಗುತ್ತಿಗೆ ನಿರ್ವಹಿಸಲು ಅವಕಾಶ ಕಲ್ಪಿಸಿದ್ದು, ಈ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಚುನಾವಣೆಯಿಂದ 6 ವರ್ಷಗಳ ಕಾಲ ಬಹಿಷ್ಕಾರಿಸಲಾಗಿದೆ.
ಇನ್ನು ಇವರು ನಿರ್ವಹಿಸಿದ ಎಲ್ಲಾ ಕಾಮಗಾರಿಗಳ ಬಗ್ಗೆ ಪಂಚಾಯತ್ ಅಳತೆ ಪುಸ್ತಕದಲ್ಲಿ ದಾಖಲಾಗಿದ್ದು, ಕಾಮಗಾರಿಗಳ ಸಂಬಂಧ ಬಿಲ್ ಪಾವತಿಗೆ ಜಗದೀಶ ಹೆಗ್ಡೆಯವರು ಸಹಕರಿಸಿ ಕರ್ತವ್ಯಲೋಪ ಎಸಗಿದ್ದಾರೆ. ಅಷ್ಟೇ ಅಲ್ಲದೆ ಕಾಮಗಾರಿಗಳನ್ನು ನಿಯಮ ಬಾಹಿರವಾಗಿ ತನ್ನ ಸಹೋದರನಿಗೆ ಗುತ್ತಿಗೆ ನೀಡಿರುವ ಆರೋಪಗಳು ಸಾಬೀತಾಗಿದೆ. ಇನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993 ರ ಪ್ರಕರಣ 43(ಎ)(1)(v)ರನ್ವಯ ಸದಸ್ಯತ್ವ ರದ್ದುಗೊಳಿಸಿ ಯಾವುದೇ ಪಂಚಾಯತ್ ಗೆ ಮುಂದಿನ 6 ವರ್ಷಗಳವರೆಗೆ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪೀಠಾಧಿಕಾರಿಗಳಾದ(ಗ್ರಾಮ ಪಂಚಾಯತ್) ಶಿವಕುಮಾರ ರವರು 05.01.2026 ರಂದು ಆದೇಶ ನೀಡಿರುತ್ತಾರೆ.
ಸ್ಥಳೀಯ ನಿವಾಸಿ ಹರೀಶ್ ಕುಮಾರ್ ಇವರು ಜಗದೀಶ್ ಹೆಗ್ಡೆಯವರ ವಿರುದ್ಧ ಇಲಾಖೆಗೆ ದೂರು ನೀಡಿದ್ದರು ಎಂದು ತಿಳಿದು ಬಂದಿದೆ.


