ಭಾರತೀಯ ಸೇನೆ ಮತ್ತು ವಿಶೇಷ ಕಾರ್ಯಾಚರಣೆ ತಂಡವು ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಅಡ್ಡಿಪಡಿಸಲು ಹೊಂಚು ಹಾಕುತ್ತಿರುವ ಉಗ್ರರ ಸಂಚನ್ನು ವಿಫಲಗೊಳಿಸುವ ನಿಟ್ಟಿನಲ್ಲಿ ಜಮ್ಮು-ಕಾಶ್ಮೀರದ ಚೆನಾಬ್ ಕಣಿವೆಯಲ್ಲಿ ಭಾರೀ ಕಾರ್ಯಾಚರಣೆ ಕೈಗೊಂಡಿದೆ.
ಗುಪ್ತಚರ ಇಲಾಖೆಯ ಮಾಹಿತಿಯ ಪ್ರಕಾರ, ಸುಮಾರು 30 ರಿಂದ 35 ಪಾಕಿಸ್ತಾನಿ ಉಗ್ರರು ಜಮ್ಮು ಪ್ರಾಂತ್ಯದ ದಟ್ಟ ಅರಣ್ಯಗಳಲ್ಲಿ ಅಡಗಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಈ ನಿಟ್ಟಿನಲ್ಲಿ ಭಾರತೀಯ ಸೈನಿಕರು ಗುಡ್ಡಗಾಡು ಪ್ರದೇಶಗಳಲ್ಲಿ ಮೈನಸ್ ಡಿಗ್ರಿ ತಾಪಮಾನ ಹಾಗೂ ಹಿಮಪಾತದ ನಡುವೆಯೂ ಹದ್ದಿನ ಕಣ್ಣಿಟ್ಟಿದ್ದಾರೆ.
ಇತ್ತೀಚೆಗೆ ಸುರಿದ ಹಿಮಪಾತದ ಹಿನ್ನೆಲೆಯಲ್ಲಿ ಬೆಟ್ಟದ ಮೇಲ್ಭಾಗದ ದಾರಿಗಳು ಮುಚ್ಚಲ್ಪಡುವ ಮೊದಲು, ಉಗ್ರರು ಜನವಸತಿ ಪ್ರದೇಶಗಳತ್ತ ಅಥವಾ ಗುಡ್ಡದ ಕೆಳಭಾಗಕ್ಕೆ
ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ದೋಡಾ, ಕಿಶ್ತ್ವಾರ್, ರಾಂಬನ್, ಉಧಂಪುರ ಮತ್ತು ಕತುವಾ ಜಿಲ್ಲೆಗಳ ಎತ್ತರದ ಪ್ರದೇಶಗಳಲ್ಲಿ ಭಾರತೀಯ ಸೇನೆ ಒಂದು ವಾರದಿಂದ ಹೊಸ ವರ್ಷದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾರ್ಯಾಚರಣೆ ನಡೆಯುತ್ತಿದೆ.


