ಬೆಂಗಳೂರು: ಪುತ್ತೂರು ಮೂಲದ ಯುವಕ ರಾಜಧಾನಿ ಬೆಂಗಳೂರಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಡಿವಾಳದ ಗ್ರ್ಯಾಂಡ್ ಚಾಯ್ಸ್ ಲಾಡ್ಜ್ನಲ್ಲಿ 20 ವರ್ಷದ ತಕ್ಷಿತ್ ಎನ್ನುವ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ತಕ್ಷಿತ್ ಶವ ಶುಕ್ರವಾರ ರಾತ್ರಿ ಪತ್ತೆಯಾಗಿದ್ದು, 8 ದಿನದ ಹಿಂದೆ ತಕ್ಷಿತ್ ತನ್ನ ಪ್ರೇಯಸಿಯ ಜೊತೆ ಬೆಂಗಳೂರಿಗೆ ಬಂದಿದ್ದ ಎಂದು ವರದಿಯಾಗಿದೆ.
ತಕ್ಷಿತ್ ಅಕ್ಟೋಬರ್ 9 ರಂದು ಗ್ರ್ಯಾಂಡ್ ಚಾಯ್ಸ್ನಲ್ಲಿ ಮಡಿಕೇರಿಯ ವಿರಾಜಪೇಟೆಯ ತನ್ನ ಪ್ರೇಯಸಿ ಪ್ರಿಯಾಂಕಾ ಜೊತೆ ರೂಮ್ ಮಾಡಿದ್ದ. 8 ದಿನಗಳ ಕಾಲ ಲಾಡ್ಜ್ನಲ್ಲಿ ಲವ್ವರ್ಸ್ಗಳು ವಾಸವಿದ್ದರು. 9ನೇಯ ದಿನ ಯುವಕ ಸಾವನ್ನಪ್ಪುವ ಮುಂಚೆಯೇ ಯುವತಿ ಬೆಂಗಳೂರನ್ನು ತೊರೆದಿದ್ದಳು ಎನ್ನಲಾಗಿದೆ. ಯುವತಿ ಬೆಂಗಳೂರು ತೊರೆದ ಬಳಿಕ ಯುವಕ ನಿಗೂಢವಾಗಿ ಶವವಾಗಿ ಪತ್ತೆಯಾಗಿದ್ದಾನೆ. ಇದರಿಂದಾಗಿ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿದೆ.
ಇನ್ನು ಕಳೆದ ಎಂಟು ದಿನವೂ ತಿಂಡಿ, ಊಟ ಪಾರ್ಸೆಲ್ ತರಿಸಿಕೊಂಡೇ ರೂಮ್ನಲ್ಲಿ ಕಾಲ ಕಳೆಯುತ್ತಿದ್ದರು. ಅಷ್ಟೇ ಅಲ್ಲದೆ ತಕ್ಷಿತ್ ಸಾವನ್ನಪ್ಪುವ ಒಂದು ದಿನದ ಮೊದಲು ಸ್ವಿಗ್ಗಿಯಲ್ಲಿ ತಕ್ಷಿತ್ ಹಾಗೂ ಅವನ ಪ್ರೇಯಸಿ ಊಟ ತರಿಸಿಕೊಂಡಿದ್ದಾರೆ. ಊಟ ಮಾಡಿದ ಬಳಿಕ ಫುಟ್ ಪಾಯ್ಸನ್ ಆಗಿತ್ತು. ಬಳಿಕ ಇಬ್ಬರೂ ಮೆಡಿಕಲ್ಗೆ ಹೋಗಿ ಮಾತ್ರೆ ತಂದು ತಿಂದಿದ್ದರು. ಸ್ವಲ್ಪ ಸುಧಾರಿಸಿಕೊಂಡ ಪ್ರಿಯಾಂಕಾ ರೂಮ್ ಚೆಕ್ಔಟ್ ಮಾಡಿ ಊರಿಗೆ ವಾಪಸಾಗಿದ್ದಳು. ಆದರೆ, ರೂಮ್ನಲ್ಲಿ ಇದ್ದ ತಕ್ಷಿತ್ ಮಲಗಿದ್ದಲ್ಲಿಯೇ ಹೆಣವಾಗಿ ಹೋಗಿದ್ದಾನೆ.
ಶುಕ್ರವಾರ ರಾತ್ರಿ ಲಾಡ್ಜ್ನ ಸಿಬ್ಬಂದಿ ರೂಮ್ನ ಬಾಗಿಲು ತಟ್ಟಿದ್ದಾರೆ. ಆದರೆ, ತಕ್ಷಿತ್ ನ ರೂಮ್ನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಮಾಸ್ಟರ್ ಕೀ ಬಳಸಿ ರೂಮ್ ತೆರೆದಿರುವ ಲಾಡ್ಜ್ ಸಿಬ್ಬಂದಿಗೆ ತಕ್ಷಿತ್ನ ಮೃತದೇಹ ಕಾಣಿಸಿದೆ. ತಕ್ಷಣ ಮಡಿವಾಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲಾ ಕೋಣೆಗಳಲ್ಲಿಯೂ ತನಿಖೆ ಆರಂಭಿಸಿದ್ದಾರೆ. ಮೇಲ್ನೋಟಕ್ಕೆ ತಕ್ಷಿತ್ಗೆ ಹೃದಯಾಘಾತ ಆಗಿರೋ ಶಂಕೆ ವ್ಯಕ್ತವಾಗಿದ್ದು, ಯುಡಿಆರ್ ದಾಖಲಿಸಿ ಪೊಲೀಸರು ತನಿಖೆ ನಡೆಸಿದ್ದಾರೆ.
ತಕ್ಷಿತ್ ಹಾಗೂ ಆತನ ಲವ್ವರ್ ಪಣಂಬೂರಿನಲ್ಲಿ ಈ ಹಿಂದೆ ಬಿಬಿಎ ಓದುತ್ತಿದ್ದರು. ಬ್ಯಾಕ್ ಲಾಗ್ಸ್ ಇದ್ದ ಕಾರಣಕ್ಕೆ ಇಬ್ಬರೂ ಕಾಲೇಜಿಂದ ಡ್ರಾಪೌಟ್ ಆಗಿದ್ದರು. ಈ ವೇಳೆ ತಕ್ಷಿತ್, ತನ್ನ ಮನೆಯವರಿಗೆ ಮೈಸೂರಿಗೆ ಓದೋಕೆ ಹೋಗಿತ್ತೇನೆ ಎಂದು ಸುಳ್ಳು ಹೇಳಿ ಪ್ರೇಯಸಿ ಜೊತೆ ಮಡಿವಾಳದ ಲಾಡ್ಜ್ನಲ್ಲಿ ರೂಮ್ ಮಾಡಿಕೊಂಡಿದ್ದ ಎನ್ನಲಾಗಿದೆ.


