ಉಡುಪಿ: ಧರ್ಮಸ್ಥಳದ ನೂರಾರು ಶವ ಹೂತಿಟ್ಟ ಪ್ರಕರಣದ ಅನಾಮಿಕ ದೂರುದಾರನನ್ನು ಈಗಾಗಲೇ ಬಂಧನ ಆಗಿದ್ದು ಎಸ್ಐಟಿ ವಶದಲ್ಲಿದ್ದಾನೆ. ಧರ್ಮಸ್ಥಳ ಪ್ರಕರಣದ ಹಿಂದೆ ಯಾವ ಜಾಲ ಇದೆ ಎಂಬುದನ್ನು ಪತ್ತೆ ಮಾಡುವುದಾಗಿ ಗೃಹ ಸಚಿವ ಡಾ| ಜಿ. ಪರಮೇಶ್ವರ್ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಾಮಿಕ ಬಂಧನ ಆಗಿರುವುದು ನಿಜ. ಸದ್ಯ ಎಸ್ಐಟಿ ವಶದಲ್ಲಿದ್ದಾನೆ. ದೂರುದಾರನ ಹೇಳಿಕೆ ಆಧಾರದಲ್ಲಿ ತನಿಖೆ ಪ್ರಾರಂಭಿಸಿದ್ದೆವು. ಎಸ್ಐಟಿ ತನಿಖೆ ನಡೆಯುತ್ತಿರುವುದರಿಂದ ಬೇರೆ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದರು.
ಸದ್ಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಎಸ್ಐಟಿಯಿಂದ ಪಡೆಯುತ್ತಿದ್ದೇನೆ. ತನಿಖೆ ಪೂರ್ಣಗೊಳ್ಳುವವರೆಗೆ ಕೆಲವು ವಿಷಯಗಳನ್ನು ಬಹಿರಂಗಪಡಿಸಲಾಗದು. ಎಸ್ಐಟಿ ತನಿಖೆ ಯಾವಾಗ ಮುಕ್ತಾಯ ಆಗುತ್ತದೆ ಎನ್ನಲು ಸಾಧ್ಯವಿಲ್ಲ ಎಂದರು.
ಸುಜಾತಾ ಭಟ್ ವಿಷಯವೂ ತನಿಖೆ ಹಂತದಲ್ಲಿದೆ. ತನಿಖೆಯ ವರದಿಗಳು ಬರುವವರೆಗೆ ಮಾಹಿತಿ ನೀಡಲಾಗದು. ಯಾವುದೇ ಸಂಗತಿ ಬಹಿರಂಗವಾದರೂ ತನಿಖೆಗೆ ಅಡ್ಡಿಯಾಗಲಿದೆ ಎಂದರು.
ಬಿಜೆಪಿಯವರು ಅನೇಕ ಆರೋಪಗಳನ್ನು ಮಾಡಿ ಬೇರೆ ಬೇರೆ ರೀತಿಯ ಹೇಳಿಕೆಗಳನ್ನು ನೀಡಿರಬಹುದು. ಅವುಗಳನ್ನು ಆಧರಿಸಿ ತನಿಖೆ ಮಾಡಲಾಗದು. ಹೀಗಾಗಿ ಎಸ್ಐಟಿ ತನ್ನ ಅಂತಿಮ ವರದಿ ಸಲ್ಲಿಸುವವರಿಗೂ ಏನೂ ಹೇಳಲಾಗದು ಎಂದರು.


