ಬೆಳ್ತಂಗಡಿ : ಉಜಿರೆ ಖಾಸಗಿ ಆಸ್ಪತ್ರೆ ಮುಂಭಾಗ ಆ.6 ರಂದು ನಡೆದ ಘರ್ಷಣೆ ಸಹಿತ ಇತರ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಆ.20 ರಂದು ಮಹೇಶ್ ಶೆಟ್ಟಿ ತಿಮರೋಡಿ ,ಗಿರೀಶ್ ಮಟ್ಟಣ್ಣನವರ್, ಜಯಂತ್.ಟಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದು. ಸತತ 5 ಗಂಟೆಗಳ ವಿಚಾರಣೆ ಮುಗಿಸಿ ವಾಪಸ್ ತೆರಳಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪರಾಧ ಸಂಖ್ಯೆ 76/77/79/2025 ಪ್ರಕರಣದಲ್ಲಿ ವಿಚಾರಣೆಗಾಗಿ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಉಳಿದ 16 ಮಂದಿ ಆರೋಪಿಗಳಿಗೆ ಆ.20 ರಂದು 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಲಾಗಿತ್ತು. ಒಂದು ವೇಳೆ ಹಾಜರಾಗದಿದ್ದಲ್ಲಿ ಬಂಧಿಸಿ ವಿಚಾರಣೆಗೆ ಕರೆತರುವ ಸಾಧ್ಯತೆಯಿತ್ತು. ನೋಟಿಸ್ ಬೆನ್ನಲ್ಲೇ ಆ.20 ರಂದು ಸಂಜೆ 5 ಗಂಟೆಗೆ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟಣ್ಣ ವಿಚಾರಣೆಗೆ ಹಾಜರಾಗಿ ರಾತ್ರಿ 10 ಗಂಟೆಗೆ ವಿಚಾರಣೆ ಮುಗಿಸಿ ವಾಪಸ್ ಮನೆಗೆ ತೆರಳಿದ್ದಾರೆ.
ಉಜಿರೆ ಖಾಸಗಿ ಆಸ್ಪತ್ರೆ ಮುಂಭಾಗ ಅಕ್ರಮ ಕೂಟ ಸೇರಿದ ವಿಚಾರದಲ್ಲಿ ಸುಮೊಟೊ ಪ್ರಕರಣ ದಾಖಲಾಗಿತ್ತು. ಉಳಿದಂತೆ ಮಾಧ್ಯಮದವರ ಮೇಲೆ ಹಲ್ಲೆ ಪ್ರಕರಣ, ಮಾಧ್ಯಮದಲ್ಲಿ ಅವಹೇಳನಕಾರಿ ಹೇಳಿಕೆ ವಿರುದ್ಧ ಮಹೇಶ್ ಶೆಟ್ಟಿ ತಿಮರೋಡಿ, ಮಟ್ಟಣ್ಣನವರ್ ಸಹಿತ ಉಳಿದವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅದರಂತೆ ಠಾಣೆಗೆ ಹಾಜರಾಗಿ ಬೆಳ್ತಂಗಡಿ ಇನ್ಸ್ಪೆಕ್ಟರ್ ಸುಬ್ಬಾಪುರ್ ಮಠ್ ಮುಂದೆ ಸತತ ಐದು ಗಂಟೆಗಳ ಕಾಲ ವಿಚಾರಣೆ ಎದುರಿಸಿದರು. ಜತೆಗೆ ಅವರ ಧ್ವನಿ ಸಾಮ್ಯತೆ ಸೇರಿದಂತೆ ಒಟ್ಟು ಮೂರು ಪ್ರಕರಣದ ವಿಚಾರಣೆ ನಡೆಸಲಾಯಿತು.


