ತುಳುನಾಡಿನ ಕುಲಾಲರು ಅಥವಾ ಮೂಲ್ಯರು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಕಡೆ ಕಂಡು ಬರುತ್ತಾರೆ. 20 ನೇ ಶತಮಾನದಲ್ಲಿ ತೆರೆದುಕೊಂಡ ಬದಲಾವಣೆ ನಂತರ ಈ ಸಮಾಜದ ಜನ ಮುಂಬೈ, ಬೆಂಗಳೂರು,ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ನಾನಾ ಕಡೆ ಹೋಗಿ ನೆಲೆ ನಿಂತಿದ್ದಾರೆ. ಅತ್ಯಂತ ಕಷ್ಟ ಸಹಿಷ್ಣು ಹಾಗೂ ಪ್ರಾಮಾಣಿಕ ಸಮುದಾಯ ಎನಿಸಿಕೊಂಡಿರುವ ಇವರು ಪರಿಶ್ರಮ ಜೀವಿಗಳು. ಎಲ್ಲಿ ಹೋದರೂ ಸಹ ತಾವು ಮೊದಲಿನಿಂದಲೂ ಅನುಸರಿಸಿಕೊಂಡು ಬಂದ ಸಂಪ್ರದಾಯ, ನಿಷ್ಠೆ ಹಾಗೂ ಪ್ರಾಮಾಣಿಕತೆಯನ್ನು ಬಿಟ್ಟು ಕೊಡುವವರಲ್ಲ. ಅಷ್ಟೊಂದು ರೀತಿಯಲ್ಲಿ ಈ ಸಮಾಜ ಇಂದಿಗೂ ತನ್ನ ಸಮಾಜದ ಶ್ರೇಷ್ಠತೆಯನ್ನು ಉಳಿಸಿಕೊಂಡು ಬಂದಿದೆ.
ಅಂತಹ ಉತ್ತಮ ಹಿನ್ನೆಲೆಯ ಈ ಸಮಾಜ ಬಾಂಧವರು ಉದ್ಯೋಗ ನಿಮಿತ್ತ ಐದಾರು ದಶಕಗಳ ಹಿಂದೆಯೇ ಬೆಳಗಾವಿಗೆ ಹೋಗಿ ನೆಲೆಸಿದ್ದಾರೆ. ತಮ್ಮ ಸಮಾಜದ ಜನ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ತಮ್ಮದೇ ಆದ ಮೂಲ್ಯ ಯಾನೆ ಕುಲಾಲರ ಸಂಘವನ್ನು ಕಟ್ಟಿಕೊಳ್ಳುವ ಮೂಲಕ ಪ್ರತಿ ವರ್ಷ ವಾರ್ಷಿಕೋತ್ಸವದ ಹೆಸರಿನಲ್ಲಿ ಒಂದುಗೂಡಿಸಲು ಅಜೆಕಾರು ಮೂಲದ ಟಿ.ಕೆ.ಮೂಲ್ಯರು ಮುಂದಾಗುತ್ತಾರೆ.
ಇಡೀ ದಿನ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತಾವು ಕರಾವಳಿಯಲ್ಲಿ ಅನುಸರಿಸಿಕೊಂಡು ಬಂದ ಮೂಲ ಆಚರಣೆಯನ್ನು ಕರಾವಳಿಯ ಆಚೆಗೂ ಇದ್ದು ತಮ್ಮ ಮುಂದಿನ ಪೀಳಿಗೆಗೂ ಧಾರೆ ಎರೆಯುತ್ತಿರುವುದು ಪ್ರತಿಯೊಂದು ಸಮಾಜಕ್ಕೆ ಮಾದರಿ ಎನಿಸಿಕೊಂಡಿದೆ.
ಟಿ.ಕೆ. ಮೂಲ್ಯ ಅವರ ಕನಸಿನ ಫಲವಾಗಿ ಹುಟ್ಟಿಕೊಂಡ ಮೂಲ್ಯ ಯಾನೆ ಕುಲಾಲರ ಸಂಘ 1999ರಲ್ಲಿ ಉದಯವಾಯಿತು. ಈ ಸಂಘಕ್ಕೆ ಈಗ 25 ವರ್ಷದ ಸಂಭ್ರಮ. ಮೂಲ್ಯ ಯಾನೆ ಕುಲಾಲರ ಸಂಘದ 25 ನೇ ವಾರ್ಷಿಕೋತ್ಸವ ಫೆ.9 ರಂದು ಬೆಳಗಾವಿಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಕ್ರೀಡಾಕೂಟ ಸಂದರ್ಭದಲ್ಲಿ ವಿಜೇತರಾದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಅದ್ದೂರಿನಿಂದ ಏರ್ಪಡಿಸಲಾಗುತ್ತಿದೆ.
ಸದಾ ಚಟುವಟಿಕೆ: ಸಂಘವು ತನ್ನ 25 ನೇ ವಾರ್ಷಿಕೋತ್ಸವ ನಿಮಿತ್ತ ಆಟಿಡೋಂಜಿ ಕೂಟ ಏರ್ಪಡಿಸಲಾಗಿತ್ತು. ಸಮಾಜ ಬಾಂಧವರ ಅನಾರೋಗ್ಯದ ವೇಳೆಯಲ್ಲಿ ಅವರ ಮನೆಗಳಿಗೆ ಭೇಟಿ ನೀಡಿ ಸಹಾಯ ಹಸ್ತ ಚಾಚಿ ಅವರಿಗೆ ಆತ್ಮವಿಶ್ವಾಸ ತುಂಬಲಾಗಿತ್ತು.ಬೆಳಗಾವಿಯಲ್ಲಿರುವ ಸಮಾಜ ಬಾಂಧವರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುವ ಮೂಲಕ ಅವರಿಗೆ ಪ್ರೋತ್ಸಾಹಿಸಲಾಗುತ್ತಿದೆ. ಸಂಕಷ್ಟದಲ್ಲಿರುವ ಸಮಾಜ ಬಾಂಧವರಿಗೆ ತಮ್ಮಿಂದಾದ ಆರ್ಥಿಕ ನೆರವು ನೀಡಲಾಗುತ್ತಿದೆ. ಮಂಗಳೂರಿನ ವೀರನಾರಾಯಣ ದೇವಸ್ಥಾನಕ್ಕೂ ಸಹ ಆರ್ಥಿಕ ಸಹಾಯವನ್ನು ನೀಡಿರುವುದು ಗಮನಾರ್ಹ.
ಒಟ್ಟಾರೆ ಬೆಳಗಾವಿ ಮೂಲ್ಯ ಯಾನೇ ಕುಲಾಲರ ಸಂಘಕ್ಕೆ ಈಗ ಬರೋಬ್ಬರಿ 25 ವರ್ಷ ತುಂಬಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಈ ಸಮಾಜ ಇತರ ಸಮಾಜಗಳಿಗೆ ಮಾದರಿಯಾಗಿ ನಿಲ್ಲುವಲ್ಲಿ ಯೋಜನೆ ಹಾಕಿಕೊಂಡಿದೆ ಎಂದು ಬೆಳಗಾವಿ ಕುಲಾಲರ ಯಾನೆ ಮೂಲ್ಯರ ಸಂಘದ ಸ್ಥಾಪಕ ಅಧ್ಯಕ್ಷ ಟಿ.ಕೆ. ಮೂಲ್ಯ ಅವರು ತಿಳಿಸಿದ್ದಾರೆ.