Thursday, August 27, 2026
Homeತಾಜಾ ಸುದ್ದಿನನಗೆ ಕೊರೊನಾ ಪಾಸಿಟಿವ್, ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲ, ಸಹಾಯ ಮಾಡಿ ಎಂದು ಸಿಎಂ ಮನೆ...

ನನಗೆ ಕೊರೊನಾ ಪಾಸಿಟಿವ್, ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲ, ಸಹಾಯ ಮಾಡಿ ಎಂದು ಸಿಎಂ ಮನೆ ಬಳಿ ಹೋದ ಕೋವಿಡ್ ಸೋಂಕಿತ..

- Advertisement -
- Advertisement -

ಬೆಂಗಳೂರು:  ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಯಾವ  ವೇಗದಲ್ಲಿ ಏರಿಕೆಯಾಗುತ್ತಿದೆ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಎಷ್ಟೋ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡೋದಕ್ಕೆ ಸರಿಯಾದ ವ್ಯವಸ್ಥೆ ಇಲ್ಲ. ಬೆಡ್ ಗಳು ಖಾಲಿ ಇಲ್ಲ. ಎಷ್ಟೋ ಮಂದಿ ಆಸ್ಪತ್ರೆಗೆ ದಾಖಲಾಗೋದಕ್ಕೆ ಸಾಧ್ಯವಾಗದೇ ಮನೆಯಲ್ಲಿ ಅಸಹಾಯಕರಾಗಿ ಪ್ರಾಣ ಬಿಡುತ್ತಿದ್ದಾರೆ.

ಇಂತಹದ್ದೇ ಘಟನೆಯೊಂದು ನಿನ್ನೆ ಬೆಂಗಳೂರಿನಲ್ಲಿ ನಡೆದಿದೆ. ಬನಶಂಕರಿಯ ಅಂಬೇಡ್ಕರ್​ನಗರದ ವ್ಯಕ್ತಿ ಗುರುವಾರ ಕುಟುಂಬ ಸಮೇತ ಸಿಎಂ ಮನೆ ಬಳಿ ಹೋಗಿ ಬೆಡ್ ವ್ಯವಸ್ಥೆ ಮಾಡಿಸಿ ಎಂದು ಗೋಗರೆದಿದ್ದಾರೆ.

ನನಗೆ ಕೊರೊನಾ ಸೋಂಕು ತಗುಲಿದೆ. ಈ ಕುರಿತು ಕರೆ ಮಾಡಿ ಮಾಹಿತಿ ನೀಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ತುಂಬಾ ಬಳಲಿದ್ದೇನೆ, ನನಗೆ ಆಸ್ಪತ್ರೆಯಲ್ಲಿ ಬೆಡ್ ಕೊಡಿಸಿ ಎಂದು ಬೇಡಿಕೊಂಡರು. ಸಹಾಯವಾಣಿಗೆ ಕರೆ ಮಾಡಿದರೂ ಸ್ಪಂದನೆ ಇಲ್ಲ. ಆಸ್ಪತ್ರೆಗಳಿಗೆ ಅಲೆದಾಡಿದರೂ ಉಪಯೋಗವಾಗಿಲ್ಲ. ಬೆಡ್ ಖಾಲಿ ಇಲ್ಲ ಎಂಬ ಉತ್ತರ ಬರುತ್ತಿದೆ. ಎಲ್ಲಿಗೆ ದಾಖಲಾಗಲಿ ಎಂದು ಸಿಎಂ ಗೃಹ ಕಚೇರಿ ಭದ್ರತಾ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಬಳಿಕ ಸೋಂಕಿತನನ್ನು ಪೊಲೀಸರು ಕೆ.ಸಿ. ಜನರಲ್ ಆಸ್ಪತ್ರೆಗೆ ಕಳುಹಿಸಿಕೊಟ್ಟರು.

ಇನ್ನು ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಕಂದಾಯ ಸಚಿವ ಆರ್. ಅಶೋಕ್ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ. ದಕ್ಷಿಣ ವಲಯದ ಖಾಸಗಿ ಆಸ್ಪತ್ರೆಗಳಿಗೆ ಯಾವುದೇ ರೋಗಿ ಬಂದರೂ ದಾಖಲಿಸಿಕೊಂಡು ಚಿಕಿತ್ಸೆ ನೀಡಬೇಕು ಎಂದು  ಸೂಚನೆ ನೀಡಿದ್ದಾರೆ. ದಕ್ಷಿಣ ವಲಯದ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ಯಾವುದೇ ರೋಗಿಯನ್ನು ವಾಪಸ್ ಕಳುಹಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಸೋಂಕಿತರಿಗೆ ಚಿಕಿತ್ಸೆ ಸಿಗುತ್ತಿಲ್ಲ ಎಂಬ ದೂರು ಇನ್ನು ಮುಂದೆ ಕೇಳಿಬರಬಾರದು ಎಂದು ತಾಕೀತು ಮಾಡಿದ್ದಾರೆ. ಸೋಂಕಿಗೆ ತಡೆ ಹಾಕಲು ಡ್ರೋನ್ ಮೂಲಕ ರಸ್ತೆಗಳಲ್ಲಿ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ. ಚೆನ್ನೈನಿಂದ 25 ಡ್ರೋನ್​ಗಳನ್ನು ತರಿಸಲಾಗಿದೆ. ದಕ್ಷಿಣ ವಲಯದಲ್ಲಿ ನಾಲ್ಕು ಡ್ರೋನ್​ಗಳ ಮೂಲಕ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ. 50 ಮೀಟರ್ ಎತ್ತರಕ್ಕೆ ಹಾರಬಲ್ಲ ಡ್ರೋನ್​ಗಳು 16 ಲೀಟರ್ ರಾಸಾಯನಿಕ ಸಾಮರ್ಥ್ಯ ಹೊಂದಿವೆ ಎಂದು ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!