ಬೆಂಗಳೂರು: ಶಿಕ್ಷಕನೋರ್ವ ಮನೆ ಪಾಠಕ್ಕೆ ಬರುತ್ತಿದ್ದ ವಿದ್ಯಾರ್ಥಿನಿಯನ್ನು ಅಪಹರಿಸಿದ ಘಟನೆ ನಡೆದಿದ್ದು, ಆರೋಪಿಯನ್ನು ಜೆ.ಪಿ. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಕನಕಪುರದ ಅಭಿಷೇಕ್ ಗೌಡ (25) ಎನ್ನಲಾಗಿದೆ.
ಈತ ಒಂದೂವರೆ ತಿಂಗಳ ಹಿಂದೆ ವಿದ್ಯಾರ್ಥಿನಿಯನ್ನು ಅಪ ಹರಿಸಿದ್ದು, ಪೊಲೀಸರು ವಿದ್ಯಾರ್ಥಿಯನ್ನು ರಕ್ಷಿಸಿದ್ದು, ಸದ್ಯ ಬಾಲಕಿಯನ್ನು ಪೊಲೀಸರು ಬಾಲಮಂದಿರದಲ್ಲಿ ಇರಿಸಿದ್ದಾರೆ.
ಘಟನೆಯ ವಿವರ: ಕನಕಪುರದ ದೊಡ್ಡ ಸಾತೇನಹಳ್ಳಿಯ ನಿವಾಸಿ ಅಭಿಷೇಕ್ ಗೆ ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದು, ದಂಪತಿಗೆ ಮಗುವಿದೆ ಎನ್ನಲಾಗಿದೆ. ಆದರೆ ದಂಪತಿಗಳಿಬ್ಬರು ವೈಯಕ್ತಿಕ ಕಾರಣಗಳಿಂದ ದೂರವಾಗಿದ್ದು, ಆರೋಪಿಯೋರ್ವನೆ ಜೆ.ಪಿ.ನಗರದ ಸಾರಕ್ಕಿಯ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ. ಈತ ಮನೆಯಲ್ಲಿಯೇ ಟ್ಯೂಷನ್ ಕೊಡುತ್ತಿದ್ದು, ಒಂದರಿಂದ ಎಸ್ಎಸ್ಎಲ್ಸಿವರೆಗೆ ಶಾಲಾ ಮಕ್ಕಳು ಟ್ಯೂಷನ್ ಗೆ ಬರುತ್ತಿದ್ದರು. ಅಪಹರಣವಾದ ಬಾಲಕಿ ಕೂಡ ಇವನ ಬಳಿಗೆ ಟ್ಯೂಷನ್ ಹೋಗುತ್ತಿದ್ದಳು. ಎಂದಿನಂತೆ ನ. 23ರಂದು ಕೂಡ ಬಾಲಕಿ ಟ್ಯೂಷನ್ಗೆ ತೆರಳಿದ್ದು, ರಾತ್ರಿಯಾದರೂ ಮನೆಗೆ ವಾಪಸ್ ಬಂದಿರಲಿಲ್ಲ. ಆರೋಪಿ ಟ್ಯೂಷನ್ ನಡೆಸುತ್ತಿದ್ದ ಸ್ಥಳಕ್ಕೆ ಪೋಷಕರು ಹೋಗಿ ಪರಿಶೀಲಿಸಿದ್ದರು. ಕೊಠಡಿಗೆ ಬೀಗ ಹಾಕಿತ್ತು. ಇದನ್ನು ಕಂಡು ಆತಂಕಗೊಂಡಿದ್ದ ಪೋಷಕರು, ದೂರು ನೀಡಿದ್ದರು. ಬಳಿಕ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದರು.
ಆರೋಪಿ ಪೊಲೀಸರಿಗೆ ಸಿಕ್ಕಿ ಬೀಳಬಾರದು ಎಂಬ ಉದ್ದೇಶದಿಂದ ಘಟನೆ ಬಳಿಕ ಫೋನ್, ಫೋನ್ ಪೇ, ಗೂಗಲ್ ಪೇ, ಎಟಿಎಂ ಸೇರಿದಂತೆ ಯಾವುದೇ ಆನ್ಲೈನ್ ವಹಿವಾಟು ನಡೆಸುತ್ತಿರಲಿಲ್ಲ. ಅದರಿಂದ ಕಾರ್ಯಾ ಚರಣೆ ತಡವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಆರೋಪಿ ಬಾಲಕಿಯನ್ನು ಕರೆದೊಯ್ಯುವ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದನ್ನು ಆಧರಿಸಿಯೇ ಕಾರ್ಯಾಚರಣೆ ನಡೆಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಇನ್ನು ಪ್ರಕರಣಕ್ಕೆ ಟ್ವಿಸ್ಟ್ ಎಂಬಂತೆ ಆರೋಪಿ ಮನೆಯಲ್ಲೇ ಮೊಬೈಲ್ ಬಿಟ್ಟು ಹೋಗಿದ್ದ. ತನಿಖೆ ನಡೆಸುವ ವೇಳೆ ಆ ಮೊಬೈಲ್ ಪತ್ತೆಯಾಗಿದ್ದು, ಮೊಬೈಲ್ ನಲ್ಲಿ ಒಂದು ವರ್ಷದಿಂದ ಬಾಲಕಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದು, ಆಕೆಯನ್ನು ಮದುವೆ ಆಗಿರುವ ಬಗ್ಗೆಯೂ ವಿಡಿಯೋ ಮಾಡಿಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


