ಸೂರತ್: ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದ ಗುಜರಾತ್ನ ಆರೋಗ್ಯ ಖಾತೆ ರಾಜ್ಯ ಸಚಿವ ಕುಮಾರ್ ಕಣಾನಿ ಅವರ ಪುತ್ರ ಪ್ರಕಾಶ್ ಕಣಾನಿ ಮತ್ತು ಅವರ ಇಬ್ಬರು ಸ್ನೇಹಿತರನ್ನು ಲೇಡಿ ಕಾನ್ಸ್ಟೇಬಲ್ ಒಬ್ಬರು ಸೂರತ್ನಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದ ವಿಡಿಯೋ ಒಂದು ಕೆಲದಿನಗಳ ಹಿಂದೆ ವೈರಲ್ ಆಗಿತ್ತು.
ಆದರೆ ಅಚ್ಚರಿಯ ಬೆಳವಣಿಗೆ ಎಂಬಂತೆ ಮಹಿಳಾ ಕಾನ್ಸ್ಟೆಬಲ್ ಸುನೀತಾ ಯಾದವ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.
ಘಟನೆಯ ವಿವರ:
ಮಹಿಳಾ ಕಾನ್ಸ್ಟೆಬಲ್ ಸುನೀತಾ ಯಾದವ್ ತಮ್ಮ ಡ್ಯೂಟಿ ವೇಳೆ ಲಾಕ್ಡೌನ್ ನಿಯಮಾವಳಿಗಳನ್ನು ಉಲ್ಲಂಘಿಸಿದ್ದ ಸಚಿವರ ಪುತ್ರ ಮತ್ತು ಆತನ ಸ್ನೇಹಿತರನ್ನು ಬಂಧಿಸಿ ಕೇಸು ದಾಖಲಿಸಿದ್ದರು. ನಂತರ, ಜಾಮೀನಿನ ಮೇಲೆ ಮೂವರನ್ನು ಬಿಡುಗಡೆ ಮಾಡಲಾಗಿದೆ.
ಸಚಿವರ ಪುತ್ರನ ವಿರುದ್ಧ ಕ್ರಮಕೈಗೊಂಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸುನೀತಾ ಯಾದವ್ ಅವರಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಕೆಲವರು ಇವರನ್ನು ‘ಲೇಡಿ ಸಿಂಗಂ’ ಎಂದು ಕರೆದಿದ್ದರು. ಇನ್ನು ಕೆಲವರು 2022 ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸಲಹೆ ನೀಡಿದ್ದರು.
ರಾಜೀನಾಮೆ ನೀಡಲು ಕಾರಣ:
‘ಹಿರಿಯ ಅಧಿಕಾರಿಗಳು ನನಗೆ ಬೆಂಬಲ ನೀಡಲಿಲ್ಲ. ಹೀಗಾಗಿ, ಕಾನ್ಸ್ಟೆಬಲ್ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ. ನನ್ನ ಕರ್ತವ್ಯವನ್ನು ನಿಭಾಯಿಸಿದ್ದೇನೆ. ತಾವು ಅತಿ ಗಣ್ಯ ವ್ಯಕ್ತಿಗಳೆಂದು ಸಚಿವರ ಪುತ್ರರು ಭಾವಿಸುತ್ತಾರೆ. ಇದು ನಮ್ಮ ವ್ಯವಸ್ಥೆಯಲ್ಲಿನ ದೋಷ’ ಎಂದು ಸುನೀತಾ ತಿಳಿಸಿದ್ದಾರೆ.


