ಬಂಟ್ವಾಳ: ಜಮೀನಿಗಾಗಿ ತಮ್ಮನನ್ನು ಕೊಂದ ಅಣ್ಣನಿಗೆ ಮಂಗಳೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸುನೀತಾ ಎಸ್. ಜಿ ಅವರು ಜೀವಾವಧಿ ಶಿಕ್ಷೆ ವಿಧಿಸಿ ಶುಕ್ರವಾರದಂದು ತೀರ್ಪು ನೀಡಿದ್ದಾರೆ.
ಬಂಟ್ವಾಳ ತಾಲೂಕು ನಂದರಬೆಟ್ಟು ಗ್ರಾಮದ ಐತಪ್ಪ ನಾಯ್ಕ (45) ಎಂಬವರು 2022ರ ಮೇ 10ರಂದು ಜಮೀನಿನ ವಿಚಾರಕ್ಕೆ ಸಂಬಂಧಿಸಿ ತನ್ನ ತಮ್ಮ ಬಾಳಪ್ಪ ಯಾನೆ ರಾಮ ನಾಯ್ಕ (35) ಅವರನ್ನು ಮರದ ನೊಗದಿಂದ ಹೊಡೆದು ಕೊಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತೀರ್ಪು ನೀಡಿದ ನ್ಯಾಯಾಧೀಶರು ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸರಕಾರಿ ಅಭಿಯೋಜಕ ಹರೀಶ್ಚಂದ್ರ ಉದಿಯಾವರ್ ಅವರು ವಾದಿಸಿದ್ದರು.
ನ್ಯಾಯಾಲಯವು 17 ಸಾಕ್ಷಿದಾರರನ್ನು ವಿಚಾರಣೆ ಮಾಡಿದ್ದು ಅದರಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯೆ ಡಾ.ವರ್ಷಾ ಎ.ಶೆಟ್ಟಿ ಮತ್ತು ಎಫ್.ಎಸ್.ಎಲ್ ನ ಡಾ. ಗೀತಾಲಕ್ಷ್ಮೀ ಅವರ ಸಾಕ್ಷ್ಯ ಮಹತ್ವದ್ದಾಗಿತ್ತು ಎಂದು ಸರಕಾರಿ ಅಭಿಯೋಜಕರು ತಿಳಿಸಿದ್ದಾರೆ.