ಮಂಗಳೂರು: ಇಲ್ಲಿನ ಡೊಂಗರಕೇರಿಯಲ್ಲಿ ಪಾಲಿಕೆಯ ತ್ಯಾಜ್ಯ ಕೊಂಡೊಯ್ಯವ ವಾಹನಕ್ಕೆ ಜೀವಂತ ಶ್ವಾನವನ್ನು ಅದರ ಮಾಲಕರು ಕೊಟ್ಟು ಸಾಗಿಸಲು ಹೇಳಿದ ಹೇಯ ಕೃತ್ಯ ನಡೆದಿದೆ.
ಇಲ್ಲನ ಮನೆಯೊಂದರಲ್ಲಿ ವಾಸಿಸುವ ಕುಟುಂಬವೊಂದರ ಸದಸ್ಯರು ಬೇರೆ ದೇಶದಲ್ಲಿ ವಾಸಿಸುತ್ತಿದ್ದು, ವೃದ್ಧ ಮಹಿಳೆ ಮಾತ್ರ ಈ ಮನೆಯಲ್ಲಿ ವಾಸವಾಗಿದ್ದಾರೆ. ಇಲ್ಲಿನ ಶ್ವಾನ ಇತ್ತೀಚೆಗೆ ಕೆಲವು ಕಡೆ ಉಪಟಳ ಮಾಡಿತ್ತು. ಇದೇ ಕಾರಣಕ್ಕೆ ಮನೆಗೆ ಬರುವ ತ್ಯಾಜ್ಯ ವಿಲೇವಾರಿ ವಾಹನಕ್ಕೆ ಜೀವಂತ ನಾಯಿಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ತ್ಯಾಜ್ಯ ವಿಲೇವಾರಿ ಮಾಡುವ ಕಾರ್ಮಿಕರು ಕೂಡ ಘಟನೆಯ ಕುರಿತು ಯಾವುದೇ ವಿರೋಧ ತೋರದೆ ತ್ಯಾಜ್ಯದೊಡನೆ ನಾಯಿಯನ್ನೂ ಪಚ್ಚನಾಡಿಗೆ ಸಾಗಿಸಿದ್ದಾರೆ ಎನ್ನಲಾಗಿದೆ.
ಇನ್ನು ಈ ಘಟನೆಯನ್ನು ಸ್ಥಳೀಯರೊಬ್ಬರು ಮೊಬೈಲ್ನಲ್ಲಿ ವೀಡಿಯೊ ಮಾಡಿದ್ದು, ಈ ಪ್ರಕರಣವು ಎರಡು ದಿನಗಳ ಬಳಿಕ ಬೆಳಕಿಗೆ ಬಂದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಕುರಿತು ವಿವರ ನೀಡುವಂತೆ ಪಶುಪಾಲನೆ ಇಲಾಖೆಯಿಂದ ಪಾಲಿಕೆಗೆ ನೋಟಿಸ್ ನೀಡಲಾಗಿದೆ. ಶ್ವಾನ ಇನ್ನೂ ಪತ್ತೆಯಾಗಿಲ್ಲ. ಪಚ್ಚನಾಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕುವ ಕೆಲಸ ನಡೆಯುತ್ತಿದೆ.


