ಉಡುಪಿ: ಆನ್ಲೈನ್ ನಲ್ಲಿ ಬೆಳ್ಮಣ್ ನಿವಾಸಿಯೊಬ್ಬರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಸೆನ್ ಠಾಣೆಯ ಪೊಲೀಸರು ಆರೋಪಿ ಒಡಿಶಾದ ವಿಶಾಲ್ ಕೋನಪಾಲ(30)ನನ್ನು ಬಂಧಿಸಿ, ಆತನಿಂದ 1,56,100ರೂ.ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆ ವಿವರ: ಉಡುಪಿ ಜಿಲ್ಲೆಯ ಬೆಳ್ಮಣ್ ನಿವಾಸಿ ಪ್ರಶಾಂತ್ ಶೆಟ್ಟಿ ಅವರು ವಿದೇಶದಲ್ಲಿ ಉದ್ಯೋಗಿಯಾಗಿದ್ದು, ಬೆಳ್ಮಣ್ನ ಯೂನಿಯನ್ ಬ್ಯಾಂಕ್ ಶಾಖೆಯಲ್ಲಿ ಎರಡು ಖಾತೆಗಳನ್ನು ಹೊಂದಿದ್ದರು. ಪೇಟಿಎಂ ಆನ್ಲೈನ್ ಪೇಮೆಂಟ್ ಸಿಸ್ಟಂ ಅನ್ನು ಈ ಎರಡೂ ಖಾತೆಗಳು ಹೊಂದಿದ್ದು, ಫೆ.10 ರಿಂದ 20ರ ನಡುವೆ ಯಾರೋ ಅಪರಿಚಿತರು ಇವರ ಗಮನಕ್ಕೆ ಬಾರದೆ ಒಟ್ಟು 1,56,100ರೂ.ಗಳನ್ನು ವರ್ಗಾಯಿಸಿಕೊಂಡು ನಷ್ಟ ಉಂಟು ಮಾಡಿದ್ದರು. ಈ ಬಗ್ಗೆ ಉಡುಪಿಯ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸೆನ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ಅವರ ನೇತೃತ್ವದ ಎಎಸ್ಐ ಉಮೇಶ್ ಜೋಗಿ ಮತ್ತು ಸಿಬಂದಿ ನಿಲೇಶ್ ಅವರ ತಂಡ ಒರಿಸ್ಸಾ ರಾಜ್ಯದ ಬೈರಂಪುರಕ್ಕೆ ತೆರಳಿ ಅಲ್ಲಿ ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.