ಮಂಗಳೂರು; ದುಬೈನಲ್ಲಿ ಕೆಲಸ ಅಂತಾ ಸುಳ್ಳು ಹೇಳಿ ಮಂಗಳೂರಿನಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ದುಬೈನಲ್ಲಿ ಕೆಲಸ ಅಂತ ಸುಳ್ಳು ಹೇಳಿ ಮಂಗಳೂರಿನಲ್ಲಿ ಕಳ್ಳತನದ ದಂಧೆಯಲ್ಲಿ ತೊಡಗಿ ಹಣ ಮಾಡುತ್ತಿದ್ದ ಕಳ್ಳರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ್ ಅರ್ಫಾಜ್, ಜಂಶೀರ್, ಸಫ್ವಾನ್ ಬಂಧಿತರು.
ಉಳ್ಳಾಲ, ಕೊಣಾಜೆಯಲ್ಲಿ ಇತ್ತೀಚೆಗೆ ನಡೆದಿದ್ದ ಕೆಲವಾರು ಕಳ್ಳತನದ ಪ್ರಕರಣಗಳನ್ನು ಭೇದಿಸಿದಾಗ ಪೊಲೀಸರಿಗೆ ಈ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಬಂಧಿತರಲ್ಲಿ ಓರ್ವ ಆರೋಪಿ ಬಜ್ಪೆ ನಿವಾಸಿ ಅರ್ಫಾಜ್ ನ ತಂದೆ ರಿಕ್ಷಾ ಚಾಲಕರಾಗಿದ್ದು ಮಗ ದುಡಿಯಲಿ ಮನೆಗೆ ಆಸರೆ ಆಗ್ತಾನೆ ಅಂತಾ ಸಾಲ ಸೋಲ ಮಾಡಿ ದುಬೈಗೆ ಕಳುಹಿಸಿದ್ದರು. 6 ತಿಂಗಳ ಹಿಂದೆ ಏಜೆನ್ಸಿಯೊಂದರ ಮೂಲಕ ದುಬೈಗೆ ಕೆಲಸಕ್ಕೆ ಕಳುಹಿಸಿದ್ದರು. ಅಲ್ಲಿ ಏಜೆನ್ಸಿಯವರು ಮೋಸ ಮಾಡಿದ ಕಾರಣ ಉದ್ಯೋಗ ಸಿಗದೆ ಮರಳಿ ಮಂಗಳೂರಿಗೆ ಬಂದು ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಇದೇ ವೇಳೆ ಗೆಳೆಯ ಸಫ್ವಾನ್ ಮೂಲಕ ಸುಲಭವಾಗಿ ದುಡ್ಡು ಮಾಡೋದಕ್ಕೆ ಕಳ್ಳತನಕ್ಕೆ ಇಳಿದಿದ್ದಾನೆ.
ಇನ್ನು ಕೊಣಾಜೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಹಣವನ್ನು ಬಳಿಕ ತಾಯಿಯ ಬ್ಯಾಂಕ್ ಖಾತೆಗೆ ಹಾಕಿ, ತಾನು ದುಬೈಯಲ್ಲಿ ಸಂಪಾದನೆ ಮಾಡಿದ ಹಣ ಎಂದು ನಂಬಿಸಿದ್ದ. ತಂದೆ- ತಾಯಿ ಮಗ ವಿದೇಶದಲ್ಲಿ ಚೆನ್ನಾಗಿ ಸಂಪಾದನೆ ಮಾಡುತ್ತಿದ್ದಾನೆಂದು ಖುಷಿಯಲ್ಲಿದ್ದರು. ಇದೇ ರೀತಿ 3 ತಿಂಗಳಿಂದ ಮನೆಯವರಿಗೂ ತಿಳಿಯದಂತೆ ವಂಚಿಸಿದ್ದ.
. ಮತ್ತೊಂದೆಡೆ, ಬೆಂಗಳೂರಿನಲ್ಲಿ ಜಿಮ್ ಟ್ರೈನರ್ ಆಗಿರುವುದಾಗಿ ಮನೆಯವರಿಗೆ ನಂಬಿಸಿದ್ದ ಜಂಶೀರ್ ಮಂಗಳೂರಿನಲ್ಲಿ ಕಳ್ಳತನವನ್ನೇ ದಂಧೆ ಮಾಡಿಕೊಂಡಿದ್ದ. ಇದೀಗ ಮೂವರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.


