ಉಳ್ಳಾಲ: ಹೈದರಾಬಾದ್ನಿಂದ ಐವರು ಮಹಿಳೆಯ ತಂಡ ಸಮುದ್ರತೀರಕ್ಕೆ ವಿಹಾರಕ್ಕೆ ಬಂದಿದ್ದು, ನಾಲ್ವರು ಮಹಿಳೆಯರಲ್ಲಿ ಒಬ್ಬರು ಸಮುದ್ರಪಾಲಾಗಿದ್ದು, ಉಳಿದ ಮೂವರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಮೃತಪಟ್ಟವರು ಆಂಧ್ರಪ್ರದೇಶದ ಕೊಂಡಾಪುರದ ಸಿರಿಲಿಂಗಪಲ್ಲಿ ನಿವಾಸಿ ಪಿ.ಎಲ್. ಪ್ರಸನ್ನ ಎಂಬುವವರ ಪತ್ನಿ ಪರಿಮಿ ರತ್ನ ಕುಮಾರಿ(57).
ಉಳ್ಳಾಲ ಕಡಲತೀರದಲ್ಲಿ ವಿಹರಿಸುತ್ತಿದ್ದ ಸಂದರ್ಭದಲ್ಲಿ ಬೃಹತ್ ಗಾತ್ರದ ಅಲೆಯೊಂದು ಅಪ್ಪಳಿಸಿ ನಾಲ್ವರು ಮಹಿಳೆಯರನ್ನು ನೀರಿಗೆ ಎಳೆದೊಯ್ದಿತು. ಸ್ಥಳೀಯರು ತಕ್ಷಣ ನಾಲ್ವರನ್ನು ಸಮುದ್ರದಿಂದ ಹೊರಗೆಳೆದು ರಕ್ಷಿಸಿದ್ದಾರೆ. ಇವರಲ್ಲಿ ಪರಿಮಿ ರತ್ನ ಕುಮಾರಿ ಪ್ರಜ್ಞೆ ತಪ್ಪಿದ್ದರು. ತಕ್ಷಣ ಅವರನ್ನು ದೇರಳಕಟ್ಟೆ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಅವರು ಮೃತಪಟ್ಟರು ಎಂದು ಮೂಲಗಳು ತಿಳಿಸಿವೆ.
ಹೈದರಾಬಾದ್ನಿಂದ ಐವರು ಮಹಿಳೆಯರು ಜೂನ್ 6ಕ್ಕೆ ವಿಮಾನದ ಮೂಲಕ ಮೈಸೂರಿಗೆ ಬಂದಿಳಿದಿದ್ದರು. ಅಲ್ಲಿ ಪ್ರವಾಸ ಮುಗಿಸಿದ ಅವರು ಕಾರಿನಲ್ಲಿ ಜೂ.7ಕ್ಕೆ ಕೊಡಗಿಗೆ ಹೋಗಿ, ಜೂ.9ಕ್ಕೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ, ಸೋಮವಾರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಉಳ್ಳಾಲ ಸಮುದ್ರ ತೀರ ವಿಹಾರಕ್ಕೆ ಬಂದಿದ್ದರು ಎಂದು ಈ ಪ್ರವಾಸಿ ತಂಡದಲ್ಲಿದ್ದವರು ತಿಳಿಸಿದ್ದಾರೆ.