ಚಾಮರಾಜನಗರ: ಕಾಡಾನೆಗೆ ಕಬ್ಬು ನೀಡಿದ ಲಾರಿ ಚಾಲಕನಿಗೆ 75 ಸಾವಿರ ದಂಡ ಹಾಕಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಚಾಮರಾಜನಗರ ಗಡಿಭಾಗದ ತಮಿಳುನಾಡಿನ ಆಸನೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಯೊಂದು ಲಾರಿಗೆ ಅಡ್ಡಲಾಗಿ ನಿಂತಿತ್ತು. ಎದುರು ಬಂದ ಗಜರಾಜನಿಗೆ ಲಾರಿ ಚಾಲಕ ಕಬ್ಬು ಕೊಟ್ಟಿದ್ದಾನೆ. ಆದ್ದರಿಂದ ತಮಿಳುನಾಡು ಪೊಲೀಸರು ಲಾರಿ ಚಾಲಕನಿಗೆ 75 ಸಾವಿರ ರೂಪಾಯಿ ದಂಡ ಹಾಕಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡು ಮೂಲದ ಸಿದ್ದರಾಜು ಎಂಬ ಲಾರಿ ಚಾಲಕನಿಗೆ ಪೊಲೀಸರು ದಂಡ ಹಾಕಿದ್ದಾರೆ. ಚಾಮರಾಜನಗರ ಗಡಿಭಾಗವಾದ ತಮಿಳುನಾಡಿನ ಆಸನೂರು ಸಮೀಪ ರಸ್ತೆ ಬದಿ ನಿಂತಿದ್ದ ಆನೆಗೆ ಕಬ್ಬಿನ ಕಂತೆಗಳನ್ನು ಎಸೆದಿದ್ದಾರೆ. ಇದನ್ನು ಕಂಡ ಗಸ್ತು ತಿರುಗುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಚಾಲಕನನ್ನು ವಿಚಾರಿಸಿ ಆತನಿಗೆ ದಂಡ ಹಾಕಿದ್ದಾರೆ.
ದಂಡ ಕಟ್ಟುವವೆರೆಗೂ ಲಾರಿ ಬಿಡುವುದಿಲ್ಲ ಎಂದು ಪೊಲೀಸರು ವಾರ್ನ್ ಮಾಡಿದ್ದರು. ನಂತರ ಲಾರಿ ಚಾಲಕ ಯಾವುದೇ ಪರ್ಯಾಯ ದಾರಿಯಿಲ್ಲದೇ ದಂಡ ಕಟ್ಟಿದ್ದಾನೆ. ಕಬ್ಬಿನ ರುಚಿಗಾಗಿ ಆನೆಗಳು ಆಗಾಗ್ಗೆ ಲಾರಿಗಳಿಗೆ ಅಡ್ಡ ಹಾಕುತ್ತವೆ. ಬೆಂಗಳೂರು ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಆಸನೂರು ಭಾಗದಲ್ಲಿ ಇದು ಸಾಮಾನ್ಯವಾಗಿದೆ. ನಂತರ ಲಾರಿ ಚಾಲಕ ಈ ರೀತಿಯಾಗಿ ದಂಡ ವಿಧಿಸಿರುವುದು ಆಕ್ರೋಶಕ್ಕೂ ಕಾರಣವಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.