
ಮಂಗಳೂರಿನ ಬಿಜೈನ ‘ರೋಹನ್ ಸಿಟಿ’ಯಲ್ಲಿ ಶನಿವಾರ ರೋಹನ್ ಕಾರ್ಪೊರೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭವ್ಯ ಸನ್ಮಾನ ಸಮಾರಂಭದಲ್ಲಿ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರನ್ನು ಅತ್ಯಂತ ಗೌರವಪೂರ್ವಕವಾಗಿ ಅಭಿನಂದಿಸಲಾಯಿತು.
ಕರಾವಳಿ ಪ್ರದೇಶದ ಸಿನಿಮಾ ಹಾಗೂ ಸಾಹಿತ್ಯ ರಂಗದ ಸಾಧನೆಯನ್ನು ಕೊಂಡಾಡಿದ ಈ ಕಾರ್ಯಕ್ರಮದಲ್ಲಿ ‘ಮಿಥ್ಯ’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದ ರೂಪಶ್ರೀ ವರ್ಕಾಡಿ, ಅತ್ಯುತ್ತಮ ಬಾಲನಟ ಪ್ರಶಸ್ತಿ ಪಡೆದ ಮಾಸ್ಟರ್ ಅತೀಶ್ ಎಸ್. ಶೆಟ್ಟಿ, ಸಿನಿಮಾ ಕುರಿತ ಅತ್ಯುತ್ತಮ ಪುಸ್ತಕಕ್ಕಾಗಿ ಪ್ರಶಸ್ತಿ ಪಡೆದ ಡಾ. ಪ್ರದೀಪ್ ಕೆಂಚನೂರು ಹಾಗೂ ಅತ್ಯುತ್ತಮ ತುಳು ಚಿತ್ರ ಪ್ರಶಸ್ತಿ ಭಾಜನವಾದ ‘ಇಂಬು’ ಸಿನಿಮಾದ ನಿರ್ದೇಶಕ ಶಿವಧ್ವಜ್ ಶೆಟ್ಟಿ ಮತ್ತು ನಿರ್ಮಾಪಕ ಪ್ರಶಾಂತ್ ರೈ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ರೋಹನ್ ಕಾರ್ಪೊರೇಷನ್ ನಿರ್ದೇಶಕರಾದ ಡಿಯೋನ್ ಮೊಂಟೇರೊ ಹಾಗೂ ಜನರಲ್ ಮ್ಯಾನೇಜರ್ ಸುಮನ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಪ್ರಶಸ್ತಿ ವಿಜೇತರು ತಮ್ಮ ಸಿನಿಮಾ ಮತ್ತು ಸಾಹಿತ್ಯ ಪಯಣದ ಹಾದಿ, ಪಟ್ಟ ಶ್ರಮ ಹಾಗೂ ಬದ್ಧತೆಯ ಅನುಭವಗಳನ್ನು ಹಂಚಿಕೊಂಡು ರೋಹನ್ ಕಾರ್ಪೊರೇಷನ್ಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಡಿಯೋನ್ ಮೊಂಟೇರೊ ಅವರು, ಕರಾವಳಿ ಭಾಗಕ್ಕೆ ರಾಷ್ಟ್ರಮಟ್ಟದಲ್ಲಿ ಅಪಾರ ಕೀರ್ತಿ ತಂದಿತ್ತ ಈ ಸಾಧಕರನ್ನು ಗೌರವಿಸುವುದು ತಮ್ಮ ಸಂಸ್ಥೆಗೆ ಸಿಕ್ಕ ಹೆಮ್ಮೆ ಎಂದರಲ್ಲದೆ, ಇವರ ಸಿದ್ಧಿ ಮುಂಬರುವ ಯುವ ಕಲಾವಿದರು, ಸಾಹಿತಿಗಳು ಮತ್ತು ಚಿತ್ರಕರ್ಮಿಗಳಿಗೆ ದೊಡ್ಡ ಪ್ರೇರಣೆಯಾಗಲಿದೆ ಎಂದು ಆಶಿಸಿದರು. ಮಾಧ್ಯಮ ಪ್ರತಿನಿಧಿಗಳು ಹಾಗೂ ಆಹ್ವಾನಿತ ಗಣ್ಯರ ಸಮ್ಮುಖದಲ್ಲಿ ಲವಿತಾ ಡಿ’ಸೋಜಾ ಕಾರ್ಯಕ್ರಮ ನಿರೂಪಿಸಿದ್ದು, ಅಭಿನಂದನಾ ಸಮಾರಂಭದ ಬಳಿಕ ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.


