ಬೆಂಗಳೂರು: ಬಹುನಿರೀಕ್ಷಿತ “777 ಚಾರ್ಲಿ” ಸಿನಿಮಾ ಸಹ ನಿರ್ಮಾಪಕರ ಮೊಗದಲ್ಲಿ ನಗು ತರಿಸಿದೆ. ಜೂನ್ 10ರಂದು ವಿಶ್ವದಾದ್ಯಂತ ಬಿಡುಗಡೆ ಆಗಿರುವ “ಚಾರ್ಲಿ” ಸಿನಿಮಾ ಯಶಸ್ವಿ 25 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಈ ಖುಷಿಯ ವಿಚಾರವನ್ನೇ ಎಲ್ಲರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದಲೇ ಇಡೀ ತಂಡ ಒಂದೆಡೆ ಸೇರಿತ್ತು. ಸಿನಿಮಾ ಶುರುವಾದಾಗಿನಿಂದ ಹಿಡಿದು, ಯಶಸ್ವಿ 25 ದಿನಗಳ ಪ್ರದರ್ಶನ ಮುಂದುವರಿಸಿರುವ ಬಗ್ಗೆಯೂ ಎಲ್ಲರೂ ಮಾತನಾಡಿದರು. ಇದೆಲ್ಲದರ ಜತೆಗೆ ಚಿತ್ರದ ಮುಖ್ಯ ಉದ್ದೇಶ ಏನು? ಅದನ್ನು ಈಡೇರಿಸುವುದಾಗಿ ನಿರ್ಮಾಪಕ ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದಾರೆ.
“ಇಡೀ ಸಿನಿಮಾದಲ್ಲಿ ಚಾರ್ಲಿಯೇ ಪ್ರಧಾನ. ಆಕೆಗೆ ಸಿನಿಮಾದಿಂದ ಬಂದ ಆದಾಯವನ್ನು ಕೊಡಲು ಆಗುವುದಿಲ್ಲ. ಅದರ ಬದಲಿಗೆ ಈ ಸಿನಿಮಾದ ಮುಖ್ಯ ಉದ್ದೇಶ ಏನಿದೆಯೋ ಅದನ್ನು ಈಡೇರಿಸುವ ಕೆಲಸವನ್ನು ಮಾಡಲಿದ್ದೇವೆ. ಚಿತ್ರದ ಶೇ. 5 ಆದಾಯವನ್ನು ಚಾರ್ಲಿಗೆ ನೀಡಲಿದ್ದೇವೆ. ಅಂದರೆ ಸರಿಸುಮಾರು 5 ಕೋಟಿ ರೂ ಅದಾಗಲಿದೆ. ಅದನ್ನು ನೇರವಾಗಿ ಬಳಸಿಕೊಳ್ಳದೇ, ಬ್ಯಾಂಕ್ನಲ್ಲಿ ಚಾರ್ಲಿ ಹೆಸರಿನಲ್ಲಿ ಖಾತೆ ತೆರೆದು ಠೇವಣಿ ಇಟ್ಟು, ಅದರಿಂದ ಬರುವ ಬಡ್ಡಿಯಲ್ಲಿ ಎನ್ಜಿಒ ಶುರು ಮಾಡುವ ಪ್ಲಾನ್ ಇದೆ” ಎನ್ನುವ ರಕ್ಷಿತ್ ದೇಶದಾದ್ಯಂತ ಈ ಕೆಲಸ ನಡೆಯಲಿದೆ ಎಂದಿದ್ದಾರೆ.
” ಇದು ಕೇವಲ ಕರ್ನಾಟಕ ಮಾತ್ರವಲ್ಲ ಭಾರತದಾದ್ಯಂತ ನಡೆಯಲಿದೆ. ಶ್ವಾನ ದತ್ತು,ಅವುಗಳ ಪಾಲನೆ ಪೋಷಣೆ ರೀತಿಯ ಕೆಲಸಗಳೂ ಇದರ ಅಡಿಯಲ್ಲಿ ನಡೆಯಲಿವೆ. ರೆಸ್ಕ್ಯೂ ಸೆಂಟರ್ಗಳನ್ನೂ ಸ್ಥಾಪಿಸುವ ಇರಾದೆ ತಂಡದ್ದು. ಇದರಲ್ಲಿ ಕೇವಲ ನಾವಷ್ಟೇ ಅಲ್ಲ ಎಲ್ಲರೂ ಭಾಗವಹಿಸಿಬಹುದು. ಎಲ್ಲರೂ ಕಲಿಯುಗದ ಧರ್ಮರಾಜ ಆಗಬಹುದು. ಚಾರ್ಲಿ ರೀತಿಯ ಸುಮಾರು ಜೀವಗಳು ಕಾಯುತ್ತಿವೆ. ನಾವು ಸಿನಿಮಾ ಶುರುವಾದ ಮೇಲೂ ಅವುಗಳ ರಕ್ಷಣೆ ಕೆಲಸ ಮಾಡುತ್ತ ಬಂದಿದ್ದೆವು. ಇದೀಗ ಸಿನಿಮಾ ಯಶಸ್ವಿಯಾಗಿದೆ. ಒಳ್ಳೇ ಆದಾಯ ತಂದುಕೊಟ್ಟಿದೆ. ಆ ಹಿನ್ನೆಲೆಯಲ್ಲಿ ಈ ಕೆಲಸಕ್ಕೆ ಕೈ ಹಾಕಿದ್ದೇವೆ” ಎಂದಿದ್ದಾರೆ ರಕ್ಷಿತ್.