ಮಂಗಳೂರು; ನಗರದ ವಿವಿದೆಡೆ ಮಹಿಳೆಯರ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಂಗಳೂರು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಜಗದೀಶ್ ಶೆಟ್ಟಿ, ಸುಜಿತ್ ಶೆಟ್ಟಿ, ಸುರೇಶ್ ರೈ ಬಂಧಿತ ಆರೋಪಿಗಳು.
ಬಂಧಿತರಿಂದ ಸುಲಿಗೆ ಮಾಡಿದ ಸುಮಾರು 90 ಗ್ರಾಂ ತೂಕದ ಚಿನ್ನಾಭರಣಗಳನ್ನು, 2 ಸ್ಕೂಟರ್ ಮತ್ತು 3 ಮೊಬೈಲ್ ಪೋನ್ ಗಳನ್ನು ಒಟ್ಟು 5 ಲಕ್ಷ ಮೌಲ್ಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು ನಗರದಲ್ಲಿ ಆಗಸ್ಟ್ ತಿಂಗಳಲ್ಲಿ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2 ಸರ ಸುಲಿಗೆ ಪ್ರಕರಣ ಮತ್ತು ಕಂಕನಾಡಿ ಠಾಣಾ ವ್ಯಾಪ್ತಿಯಲ್ಲಿ 1 ಸರ ಸುಲಿಗೆ ಪ್ರಕರಣ ದಾಖಲಾಗಿತ್ತು. ದಿನಾಂಕ: 14-8-2022 ರಂದು ಮಂಗಳೂರು ಕದ್ರಿ ಆಳ್ವಾರಿಸ್ ರಸ್ತೆಯಲ್ಲಿ ಪುಣೆ ಮೂಲದ ಮಹಿಳೆಯ ಸರ ಕಳ್ಳತನ ಆಗಿತ್ತು, ಅನಂತರ ದಿನಾಂಕ: 24-8-2022 ರಂದು ಕದ್ರಿ ಠಾಣೆ ವ್ಯಾಪ್ತಿ ಕುಲಶೇಖರ ಎವರೆಸ್ಟ್ ಪ್ಲಾಸ್ಟಿಕ್ ಫ್ಯಾಕ್ಟರಿಯ ರಸ್ತೆಯಲ್ಲಿ ಮಹಿಳೆಯ ಸರ ಸುಲಿಗೆ ಪ್ರಕರಣ ದಾಖಲಾಗಿತ್ತು. ದಿನಾಂಕ: 25-8-2022 ರಂದು ಮಂಗಳೂರು ನಗರ ಕಂಕನಾಡಿ ಪೊಲೀಸ್ ಠಾಣೆಯ ಶಕ್ತಿನಗರದ ರಾಜೀವ ನಗರದ ದಲ್ಲಿ ಮಹಿಳೆ ಸರ ಸುಲಿಗೆ ನಡೆದಿತ್ತು. ಅದರಂತೆ ಈ ಸರ ಸುಲಿಗೆ ಮಾಡಿದ ಆರೋಪಿಗಳ ಪತ್ತೆ ಬಗ್ಗೆ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್ ಮತ್ತು ಸಿಸಿಬಿ ಅಧಿಕಾರಿ/ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸರ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ 3 ಜನ ಆರೋಪಿಗಳನ್ನು ಮಂಗಳೂರು ನಗರದ ಕಾರ್ ಸ್ಟ್ರೀಟ್ ಬಳಿ ಚಿನ್ನದ ಸರವನ್ನು ಮಾರಾಟ ಮಾಡಲು ಬಂದತಹ ಸಂದರ್ಭದಲ್ಲಿ ಮಾಹಿತಿ ಮೇರೆಗೆ ಬಂಧಿಸಿದ್ದಾರೆ.
ಆರೋಪಿಗಳ ಪೈಕಿ ಜಗದೀಶ್ ನು ರಿಕ್ಷಾ ಚಾಲಕನಾಗಿದ್ದು, ಸುಜಿತ್ ಶೆಟ್ಟಿ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದಾನೆ. ಸುರೇಶ್ ರೈ ಟೆಂಪೋ ಚಾಲಕನಾಗಿರುತ್ತಾನೆ. ಇನ್ನು ಸುಜಿತ್ ಶೆಟ್ಟಿ ಎಂಬಾತನು ಮಂಗಳೂರಿನಲ್ಲಿ 2002 ರಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದ ಆರೋಪಿಯಾಗಿರುತ್ತಾನೆ.