ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ನಮ್ಮನ್ನು ಅಗಲಿ ಒಂದು ತಿಂಗಳಾಗಿದೆ. ಹಲವಾರು ಚಿತ್ರಗಳಲ್ಲಿ ಹೀರೋ ಪಾತ್ರಧಾರಿಯಾಗಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿರುವ ವಿಜಯ್ ಅವರು ಇದೀಗ ಸಾವಿನ ಬಳಿಕವೂ ಹೀರೋ ಆಗಿಯೇ ಉಳಿದಿದ್ದಾರೆ.
ಸಂಚಾರಿ ವಿಜಯ್ ಅವರ ಯಕೃತ್ತು (ಲಿವರ್), 2 ಮೂತ್ರಪಿಂಡಗಳು, ಹೃದಯದ ಕವಾಟ (ಹಾರ್ಟ್ ವಾಲ್ವ್) ಮತ್ತು ಕಾರ್ನಿಯಾಗಳನ್ನು ಪಡೆದು ಅವಶ್ಯವಿರುವ ರೋಗಿಗಳಿಗೆ ಕಸಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕುಟುಂಬದ ಈ ನಿರ್ಧಾರದಿಂದಾಗಿ ಅಚ್ಚರಿ ಎನ್ನುವಂತೆ ದಾಖಲೆಯ ಪ್ರಮಾಣದಲ್ಲಿ ಜನರು ಅಂಗಾಂಗದಾನಕ್ಕೆ ಮುಂದಾಗಿದ್ದಾರೆ. ಸಂಚಾರಿ ವಿಜಯ್ ಅವರಂತೆಯೇ ತಾವೂ ಅಂಗಾಂಗ ದಾನ ಮಾಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.
ಅಂಗಾಂಗ ದಾನದ ಪ್ರಕ್ರಿಯೆ ಕೋವಿಡ್ ಕಾರಣಗಳಿಂದ ನಿಂತೇ ಹೋಗಿತ್ತು. ಹೆಚ್ಚಿನ ಮಂದಿ ಇದಕ್ಕೆ ಮುಂದೆ ಬರುತ್ತಿರಲಿಲ್ಲ. ಆದರೆ ಸಂಚಾರಿ ವಿಜಯ್ ಅವರ ಅಂಗಾಂಗ ದಾನದ ನಂತರ ಕೇವಲ 20 ದಿನಗಳಲ್ಲಿ 230 ಜನ ಅಂಗಾಂಗ ದಾನ ಮಾಡಲು ಮುಂದೆ ಬಂದಿದ್ದಾರೆ ಎಂದು ಕರ್ನಾಟಕ ರಾಜ್ಯದಲ್ಲಿ ಅಂಗಾಂಗ ದಾನದ ನಿರ್ವಹಣೆ ಮಾಡುವ ಸ್ಟೇಟ್ ಆರ್ಗನ್ ಟ್ರಾನ್ಸ್ಪ್ಲಾಂಟ್ ಮತ್ತು ಟಿಶ್ಶೂ ಆರ್ಗನೈಜೇಶನ್ ಸಿಬ್ಬಂದಿ ತಿಳಿಸಿದ್ದಾರೆ.