ಬೈಂದೂರು: ಐದು ದಿನದ ಹಿಂದೆ 18 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿ ಮದ್ಯಪ್ರದೇಶಕ್ಕೆ ಪರಾರಿಯಾಗಿದ್ದ ದರೋಡೆಕೋರರನ್ನು ಬೈಂದೂರು ಪೊಲೀಸರು 2870 ಕಿ.ಮೀ ಬೆನ್ನಟ್ಟಿ ಕಳವುಗೈದ ಚಿನ್ನಾಭರಣ ಸಮೇತ ಆರೋಪಿಗಳು ಸಿನಿಮೀಯ ರೀತಿಯಲ್ಲಿ ಬಂಧಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ
ಕಳವು ಪ್ರಕರಣದ ಹಿನ್ನೆಲೆ: ಮಹಾರಾಷ್ಟ್ರದ ಥಾಣೆ ನಿವಾಸಿ ಈಶ್ವರ್ ದಲಿಚಂದ್ ಮುಂಬೈನಲ್ಲಿ ಚಿನ್ನ ಖರೀದಿಸಿ ಉಡುಪಿ,ಮಂಗಳೂರು ಮುಂತಾದ ಕಡೆ ಮಾರಾಟ ಮಾಡುವ ವ್ಯವಹಾರ ನಡೆಸುತ್ತಿದ್ದರು.ಮುಂಬೈನಿಂದ ಬಸ್ನಲ್ಲಿ ಹೊರಟು ಜೂನ್ 16 ರಂದು ಶಿರೂರು ನೀರ್ಗದ್ದೆ ಶಿವಸಾಗರ್ ಹೋಟೆಲ್ನಲ್ಲಿ ಉಪಹಾರಕ್ಕೆಂದು ನಿಲ್ಲಿಸಿದಾಗ ಅಪರಿಚಿತ ತಂಡವೊಂದು 466.90 ಗ್ರಾಂ ಒಟ್ಟು 18 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಎಗರಿಸಿ ಪರಾರಿಯಾಗಿದ್ದಾರೆ.ಈ ಬಗ್ಗೆ ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ತಕ್ಷಣ ಕಾರ್ಯಪ್ರವೃತ್ತರಾದ ಬೈಂದೂರು ಆರಕ್ಷಕರ ತಂಡ: ದೂರು ದಾಖಲಾಗುತ್ತಿದ್ದಂತೆ ಡಿ.ವೈ.ಎಸ್.ಪಿ ಶ್ರೀಕಾಂತ ಮಾರ್ಗದರ್ಶನದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ನೇತ್ರತ್ವದಲ್ಲಿ ಎರಡು ವಿಶೇಷ ತಂಡ ರಚಿಸಲಾಗಿತ್ತು.ಗಂಗೊಳ್ಳಿ ಠಾಣಾಧಿಕಾರಿ ವಿನಯ್ ಹಾಗೂ ಬೈಂದೂರು ಠಾಣಾಧಿಕಾರಿ ಪವನ್ ನಾಯಕ್ ಮುಂದಾಳತ್ವದ ಪ್ರತ್ಯೇಕ ತಂಡಗಳು ರಚಿಸಿ ಒಂದು ತಂಡ ಬೆಂಗಳೂರಿಗೆ ಹಾಗೂ ಇನ್ನೊಂದು ತಂಡ ಮುಂಬೈ ಕಡೆಗೆ ಕಳುಹಿಸಲಾಗಿತ್ತು.
ಚಿನ್ನ ಕಳ್ಳರ ಮಾಸ್ಟರ್ ಪ್ಲಾನ್: ಚಿನ್ನಾಭರಣ ದರೋಡೆಗೈದ ದೇಶಾದ್ಯಂತ ವ್ಯವಸ್ಥಿತಿ ಜಾಲ ಹೊಂದಿರುವ ಜೊತೆಗೆ ಸಾಕಷ್ಟು ಮಾಸ್ಟರ್ ಪ್ಲಾನ್ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ಮಾರುತಿ ಬ್ರಿಝಾ ಕಾರಿನ ನಂಬರ್ ಬದಲಿಸಿ ಶಿವಮೊಗ್ಗ ಕಡೆಗೆ ಪರಾರಿಯಾಗಿದ್ದರು.ಸಾಗರದಲ್ಲಿ ತೆಲಂಗಾಣ ,ಬೆಂಗಳೂರು ನಂಬರ್ ಪ್ಲೇಟ್ ಬಳಸಿದರೆ ಶಿವಮೊಗ್ಗದಲ್ಲಿ ವಾಹನದ ನಿಜವಾದ ನಂಬರ್ ಪ್ಲೇಟ್ ಬಳಸಿದ್ದರು.ವಿವಿಧ ಟೋಲ್ಗೇಟ್ ಸಂಪರ್ಕಿಸಿ ಫಾಸ್ಟ್ಯಾಗ್ ಮೂಲಕ ವಾಹನ ಸಾಗಿದ ಮಾರ್ಗವನ್ನು ಕಂಡು ಹಿಡಿದ ಪೊಲೀಸರು 4 ಗಂಟೆಯಲ್ಲಿ 250 ಕಿ.ಮೀ ಕ್ರಮಿಸಿದ್ದರು.ಬೆಂಗಳೂರಿನ ತೆಲಂಗಾಣ ಗಡಿಭಾಗಕ್ಕೆ ತೆರಳಿ ಬಳಿಕ ಮಹಾರಾಷ್ಟ್ರದಿಂದ ಮದ್ಯಪ್ರದೇಶಕ್ಕೆ ತೆರಳುವ ಮಾಹಿತಿ ಪಡೆದ ಪೊಲೀಸರು ಮಹಾರಾಷ್ಟ್ರ ಪೊಲೀಸರ ಸಹಕಾರ ಪಡೆದು ಮಹಾರಾಷ್ಟ್ರದ ದುಬೆ ಜಿಲ್ಲೆಯ ಸೋನಗಿರ್ ಎನ್ನುವ ಟೋಲ್ಗೇಟ್ ಬಳಿ ವಾಹನ ತಡೆದಿದ್ದಾರೆ. ಪೊಲೀಸರ ಮೇಲೆ ವಾಹನ ಹಾಯಿಸಿ ಹಲ್ಲೆ ಮಾಡಲು ಮುಂದಾಗಿದ್ದ ತಂಡವನ್ನು ಯಶಸ್ವಿಯಾಗಿ ಎಲ್ಲಾ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಸಫಲರಾಗಿದ್ದಾರೆ.ಆರೋಪಿಗಳಾದ ಆಲಿಬಾನ್(31),ಆಮ್ಬಲ್ಖಾನ್ (35) ಇಕ್ರಾರ್ (30) ಹಾಗೂ ಗೋಪಾಲ್ ಆಮ್ಲವರ್ (35) ರನ್ನು ಬಂಧಿಸಿ ನ್ಯಾಯಾಲಯಕ್ಕೆ ಐದು ದಿನದ ಪೊಲೀಸ್ ಕಸ್ಟಡಿ ನೀಡಿದೆ.