ಮಂಗಳೂರು: ಮಂಗಳೂರು ನಗರದ ಬಂದರು ಠಾಣಾ ಪೋಲಿಸರು ಪರವಾನಿಗೆ ಇಲ್ಲದೇ ಅನಧಿಕೃತವಾಗಿ ದಾಸ್ತಾನು ಇಟ್ಟಿದ್ದ ಭಾರೀ ಪ್ರಮಾಣದ ಸ್ಫೋಟಕಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.
ಒಟ್ಟು 1ಲಕ್ಷ 11 ಸಾವಿರ ಮೌಲ್ಯದ ಸ್ಪೋಟಕಗಳೆಂದು ಅಂದಾಜಿಸಲಾಗಿದ್ದು,1,725 ಕೆಜಿಗೂ ಹೆಚ್ಚು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ಫೋಟಕವನ್ನು ಮಂಗಳೂರು ಬಂದರಿನ ಅಜೀಜುದ್ದೀನ್ ರಸ್ತೆಯ ಗಾಂಧಿ ಸನ್ಸ್ ಕಟ್ಟಡದಲ್ಲಿ ಅಕ್ರಮವಾಗಿ ದಾಸ್ತಾನು ಇಡಲಾಗಿದ್ದು, ಪರವಾನಿಗೆ ಇಲ್ಲದೇ ಅನಧಿಕೃತವಾಗಿ ದಾಸ್ತಾನು ಇಟ್ಟಿದ್ದ ಆರೋಪಿ ಆನಂದ ಗಟ್ಟಿ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಲ್ಫರ್ ಪೌಡರ್ 400 k.g, ಪೊಟ್ಯಾಸಿಯಮ್ ನೈಟ್ರೇಟ್ 350 ಕೆಜಿ, ಬೇರಿಯಂ ನೈಟ್ರೇಟ್ 50 ಕೆಜಿ, ಪೊಟ್ಯಾಸಿಯಮ್ ಕ್ಲೋರೈಟ್ 395 ಕೆಜಿ, ಅಲ್ಯೂಮಿನಿಯಂ ಪೌಡರ್- 260 ಕೆಜಿ, ಚಾರ್ ಕೋಲ್- 240 ಕೆಜಿ, ಲೀಡ್ ಬಾಲ್ಸ್ 30 ಕೆಜಿ, ಆಯರ್ ಪಿಸ್ತೂಲ್ ಪೆಲೆಟ್ಸ್ ವಶಪಡಿಸಿಕೊಂಡ ಸ್ಫೋಟಕಗಳಾಗಿವೆ.
ಆರೋಪಿ ಆನಂದ ಗಟ್ಟಿ ಗನ್ ಮಾರಾಟ ಮಾಡುವ ಅಂಗಡಿ ಹೊಂದಿದ್ದು, ಅದಕ್ಕೆ ಬೇಕಾಗುವ ವಸ್ತುಗಳನ್ನು ಸ್ಟೋರೇಜ್ ಮಾಡಲು ಗೋಡೌನ್ ಬಳಸುತ್ತಿದ್ದ. ಆದರೆ, ಅಲ್ಲಿ ಪತ್ತೆಯಾದ ಸ್ಫೋಟಕ ವಸ್ತುಗಳು ಗನ್ ತಯಾರಿಗೆ ಬಳಸುವಂಥವುಗಳಲ್ಲ. ಹೀಗಾಗಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅಲ್ಲಿ ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ದಾಸ್ತಾನು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಕಲ್ಲಿನ ಕ್ವಾರಿ, ಬಾವಿಗಳಲ್ಲಿ ಬಳಸುವ ಸ್ಫೋಟಕಗಳಿಗಾಗಿ ಇಲ್ಲಿಂದ ಕಚ್ಚಾವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಯಿಂದ ಸ್ಫೋಟಕ, ಸಿಡಿಮದ್ದು ತಯಾರಿಗೆ ಇಲ್ಲಿಂದ ಕಚ್ಚಾ ವಸ್ತುಗಳನ್ನು ಒಯ್ಯುತ್ತಿದ್ದರು ಎನ್ನುವುದು ತಿಳಿದುಬಂದಿದೆ ಎಂದು ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ. ನಕ್ಸಲ್ ಅಥವಾ ಇತರ ಸಮಾಜವಿರೋಧಿ ಕೃತ್ಯಗಳಿಗೆ ಇಲ್ಲಿಂದ ಸ್ಫೋಟಕ ಪೂರೈಕೆ ಆಗುತ್ತಿದ್ದ ಬಗ್ಗೆ ಮಾಹಿತಿಯಿಲ್ಲ. ಆದರೆ, ಈ ರೀತಿಯ ದುಷ್ಕೃತ್ಯಗಳಿಗೆ ಇಲ್ಲಿನ ಕಚ್ಚಾವಸ್ತು ಬಳಕೆಯಾಗಲ್ಲ ಎನ್ನುವ ಹಾಗಿಲ್ಲ. ಸುಲಭದಲ್ಲಿ ಇಲ್ಲಿ ಲಭ್ಯ ಆಗುತ್ತಿದ್ದುದರಿಂದ ಸಮಾಜ ವಿರೋಧಿ ಶಕ್ತಿಗಳು ಕೃತ್ಯಕ್ಕೆ ಬಳಕೆ ಮಾಡುವ ಸಾಧ್ಯತೆಯೂ ಇರುತ್ತದೆ ಎಂದಿದ್ದಾರೆ.