ಹೊಸದಿಲ್ಲಿ: ಸಾಮಾಜಿಕ ತಾಣ ಇನ್ ಸ್ಟಾಗ್ರಾಂ ನಲ್ಲಿ ಇನ್ನೊಬ್ಬ ಭಾರತೀಯ ತಂಡದ ಕ್ರಿಕೆಟಿಗನನ್ನು ಉಲ್ಲೇಖಿಸುವಾಗ ಜಾತಿ ನಿಂದನೆ ನಡೆಸಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ಹರ್ಯಾನದ ಹನ್ಸಿ ಪೊಲೀಸರು ಕ್ರಿಕೆಟಿಗ ಯುವರಾಜ್ ಸಿಂಗ್ ರನ್ನು ಬಂಧಿಸಿದ್ದಾರೆ.
ಬಳಿಕ ಮಧ್ಯಂತರ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ವರ್ಷದ ಹಿಂದೆ ರೋಹಿತ್ ಶರ್ಮಾ ಜತೆ ಲೈವ್ ಚ್ಯಾಟಿಂಗ್ ಮಾಡುವ ವೇಳೆ ಪರಿಶಿಷ್ಟ ಜಾತಿಯ ಯುಜವೇಂದ್ರ ಚಹಲ್ ಅವರನ್ನು ಜಾತಿ ಕಾರಣಕ್ಕೆ ಹೀಗಳೆದಿದ್ದರು ಎನ್ನಲಾಗಿದೆ.
ಹೈಕೋರ್ಟ್ ಆದೇಶದ ಮೇರೆಗೆ ಚಂಡೀಗಡದಿಂದ ಹಿಸ್ಸಾರ್ಗೆ ಬಂದ ಯುವರಾಜ್ ಸಿಂಗ್ ಅವರನ್ನು
ಅಲ್ಲಿನ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದರು. ಹೈಕೋರ್ಟ್ನಲ್ಲಿ ಯುವರಾಜ್ ಸಿಂಗ್ ನಿರೀಕ್ಷಣಾ
ಜಾಮೀನು ಪಡೆದಿದ್ದರಿಂದ ಅವರನ್ನು ಬಿಡುಗಡೆ ಮಾಡಲಾಗಿದೆ.
ದಲಿತ ಹಕ್ಕು ಹೋರಾಟಗಾರ ರಜತ್ ಕಲ್ಸನ್ ಎಂಬುವರು ಯುವರಾಜ್ ಸಿಂಗ್ ವಿರುದ್ಧ ಹಾನ್ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.ಇದಕ್ಕೆ ಪ್ರತಿಕ್ರಿಯಿಸಿದ್ದ ಯುವರಾಜ್ ಸಿಂಗ್ ನಾನು ಯಾವ ಸಮುದಾಯವನ್ನೂ ತುಚ್ಛವಾಗಿ ನೋಡುವುದಿಲ್ಲ. ನನ್ನಿಂದ ತಿಳಿಯದೇ ಆಡಿದ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದರು.