ಮಂಗಳೂರು; ಕುಡುಪುವಿನಲ್ಲಿ ಗುಂಪೊಂದರಿಂದ ಕೊಲೆಯಾದ ಅಶ್ರಫ್ ಗೆ ನ್ಯಾಯ ಕೊಡಿಸುವಂತೆ ಅಶ್ರಫ್ ಸಹೋದರ ಅಬ್ದುಲ್ ಜಬ್ಬಾರ್ ಸಿಪಿಐಎಂ ದ.ಕ. ಜಿಲ್ಲಾ ಸಮಿತಿಯ ಕಚೇರಿಗೆ ಆಗಮಿಸಿ ವಿನಂತಿಸಿದರು.
ಮಾಬ್ ಲಿಂಚಿಂಗ್ ಪ್ರಕರಣದ ಪ್ರಧಾನ ಆರೋಪಿಯ ಬಂಧನ ನಡೆಯದಿರುವುದು, ಕೊಲೆಗಡುಕರಿಗೆ ಶಿಕ್ಷೆ ಆಗುವ ರೀತಿಯಲ್ಲಿ ನಡೆಯಬೇಕಾದ ತನಿಖೆಗೆ ಸಂಬಂಧಿಸಿದ ತೊಡಕುಗಳ ಕುರಿತು ತಮ್ಮ ಆತಂಕವನ್ನು ಹಂಚಿಕೊಂಡರು. ದಶಕಗಳ ಕಾಲ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ, ತೀರಾ ಅಮಾಯಕ ವ್ಯಕ್ತಿತ್ವದ ಅಶ್ರಫ್ ನನ್ನು ಕುರುಡು ದ್ವೇಷದಿಂದ ಗುಂಪು ಹೊಡೆದು ಕೊಂದದ್ದು ಮಾತ್ರ ಅಲ್ಲದೆ, ಮಾರಣಾಂತಿಕ ಹಲ್ಲೆಯಿಂದ ಅಶ್ರಫ್ ನ ದೇಹ ಜರ್ಜರಿತಗೊಂಡು ಬಿದ್ದ ತರುವಾಯವೂ ಗುಂಪು ಅದೇ ಮೈದಾನದಲ್ಲಿ ಎರಡು ಗಂಟೆಗಳ ಕಾಲ ಕ್ರಿಕೆಟ್ ಆಟ ಮುಂದುವರಿಸಿದ್ದ ವಿಷಯ ತಿಳಿದು ಇಡೀ ಕುಟುಂಬಕ್ಕೆ ಆದ ಆಘಾತವನ್ನು ಬಹಳ ನೋವಿನಿಂದ ಹೇಳಿಕೊಂಡರು. ಹೊಡೆದು ಹಾಕಿದ ದುಷ್ಕರ್ಮಿಗಳ ಕುರಿತಾಗಿ ಒಂದು ದ್ವೇಷದ ಮಾತಾಡದ ಜಬ್ಬಾರ್, ಸಮಾಜದಲ್ಲಿ ಇಂತಹ ಮನಸ್ಥಿತಿ ಹುಟ್ಟಿಸಿ, ಬೆಳೆಸುತ್ತಿರುವ ವಿದ್ಯಮಾನಗಳ ಕುರಿತು ಆತಂಕ ವ್ಯಕ್ತಪಡಿಸಿದರು. ತಮ್ಮ ಸಹೋದರನ ದಾರುಣ ಸಾವಿಗೆ ನ್ಯಾಯ ಪಡೆಯಲು ನಡೆಸುವ ಹೋರಾಟಕ್ಕೆ ಜೊತೆಗಿರುವಂತೆ ವಿನಂತಿಸಿದರು.
ಸಿಪಿಐಎಂ ಪಕ್ಷ ಆರಂಭದಿಂದಲೂ ಗುಂಪು ಹತ್ಯೆ ಪ್ರಕರಣದ ನ್ಯಾಯಯುತ ತನಿಖೆಗಾಗಿ ಧ್ವನಿ ಎತ್ತುತ್ತಾ ಬಂದಿದ್ದು. ಅದನ್ನು ಮುಂದುವರಿಸಲಿದೆ. ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚನೆಗೆ ಇನ್ನಷ್ಟು ಬಲವಾಗಿ ಒತ್ತಾಯಿಸಲಿದೆ, ಅಗತ್ಯ ಬಿದ್ದಲ್ಲಿ ಸಮಾನ ಮನಸ್ಕರ ಜೊತೆ ಸೇರಿ ಹೋರಾಟವನ್ನು ಸಂಘಟಿಸಲಾಗುವುದು, ಅಶ್ರಫ್ ಕುಟುಂಬದ ಜೊತೆಗಿರುವುದಾಗಿ ಭರವಸೆ ನೀಡಲಾಯಿತು.
ಆ ಸಂದರ್ಭ ಸಿಪಿಐಎಂ ದ.ಕ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಕಾರ್ಯದರ್ಶಿ ಮಂಡಳಿ ಸದಸ್ಯರುಗಳಾದ ಕೆ ಯಾದವ ಶೆಟ್ಟಿ, ಸದಾಶಿವ ದಾಸ್ ಕುಪ್ಪೆಪದವು, ಜಿಲ್ಲಾ ಮುಖಂಡರುಗಳಾದ ಬಿ ಕೆ ಇಮ್ತಿಯಾಜ್, ನೋಣಯ್ಯ ಗೌಡ ಉಪಸ್ಥಿತರಿದ್ದರು.